
ಬೆಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.
6 ತಿಂಗಳ ಕಾಲ ಬಿಜೆಪಿಯ 18 ಶಾಸಕರನ್ನು ವಿಧಾನಸಭೆ ಕಲಾಪದಿಂದ ಅಮಾನತುಗೊಳಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಪೀಠ ಗೌರವಯುತವಾದದ್ದು, ಆದರೆ ವಿಧೇಯಕಗಳನ್ನು ಹರಿದು ಸ್ಪೀಕರ್ ಮೇಲೆ ಎಸೆದು, ಸಿಡಿ ಪ್ರದರ್ಶನ ಮಾಡಿ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ.
ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವತ್ಥನಾರಾಯಣ, ಭರತ್ ಶೆಟ್ಟಿ, ಶರಣು ಸಲಗರ, ಬಿ.ಸುರೇಶ್ ಗೌಡ, ಮುನಿರತ್ನ,ಉಮಾನಾಥ್ ಕೋಟ್ಯಾನ್, ಬಿ.ಪಿ.ಹರೀಶ್, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಬಸವರಾಜ್ ಮತ್ತಿಮೂಡ, ಬೈರತಿ ಬಸವರಾಜ್ ಸೇರಿದಂತೆ 18 ಶಾಸಕರನ್ನು ಅಮಾನತು ಮಾಡಲಾಗಿದೆ. 18 ಶಾಸಕರು ಈ ಕೂಡಲೇ ವಿಧಾನಸಭೆಯಿಂದ ಹೊರ ಹೋಗುವಂತೆ ಸ್ಪೀಕರ್ ಸೂಚಿಸಿದರು.
ಸ್ಪೀಕರ್ ಸೂಚಿಸುತ್ತಿದ್ದಂತೆ ಕೆಲ ಶಾಸಕರು ಹೊರ ನಡೆದರೆ ಇನ್ನು ಕೆಲ ಶಾಸಕರು ಸದನದಲ್ಲೇ ಧರಣಿಗೆ ಮುಂದಾಗಿದ್ದಾರೆ. ಈ ವೇಳೆ ಮಾರ್ಷಲ್ ಗಳು, ಶಾಸಕ ಮುನಿರತ್ನ, ಬಸವರಾಜ್ ಮತ್ತಿಮೋಡ್, ಬೈರತಿ ಬಸವರಾಜ್ ಸೇರಿದಂತೆ 11 ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ವಿಧಾನಸಭೆಯಿಂದ ಹೊರ ಕಳುಹಿಸಿದ ಘಟನೆ ನಡೆದಿದೆ.