ಬೆಂಗಳೂರು : ಇನ್ಮುಂದೆ ಕಂದಾಯ, ಸರ್ವೇ ದಾಖಲೆಗಳು ಸಂಪೂರ್ಣ ಡಿಜಿಟಲೀಕರಣವಾಗಲಿದ್ದು, ರಾಜ್ಯದಲ್ಲಿ ಭೂ ಸುರಕ್ಷಾ ಯೋಜನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಸೋಮವಾರ ಚಾಲನೆ ನೀಡಿದ್ದಾರೆ.
ಹೌದು, ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಬಹು ನಿರೀಕ್ಷಿತ “ಭೂ ಸುರಕ್ಷಾ” ಪ್ರಾಯೋಗಿಕ ಯೋಜನೆಗೆ ಕೊಡಗಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಚಾಲನೆ ನೀಡಿದರು.
ರೆಕಾರ್ಡ್ ರೂಂ ಗಳಲ್ಲಿ ಕಡತ ಮಿಸ್ಸಿಂಗ್ ಹಾಗೂ ಕಡತ ತಿದ್ದುವುದು ಸೇರಿದಂತೆ ಅನೇಕ ಅಕ್ರಮಗಳಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಈ ಪ್ಲ್ಯಾನ್ ಮಾಡಿದೆ. ಈ ಯೋಜನೆಯ ಅಡಿ 31 ಜಿಲ್ಲೆಯ 31 ತಾಲೂಕುಗಳ ರೆಕಾರ್ಡ್ ರೂಂ (ಭೂ ದಾಖಲೆ ಕೊಠಯ) ದಾಖಲೆಗಳನ್ನು ಪ್ರಾಯೋಗಿಕವಾಗಿ ಡಿಜಿಟಲೀಕರಣಗೊಳಿಸಲಾಗುವುದು. ಕಂದಾಯ ಮತ್ತು ಸರ್ವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಮುಂದಿನ ಮೂರು ತಿಂಗಳಲ್ಲಿ ಡಿಜಿಟಲೀಕರಣಗೊಳ್ಳಲಿದೆ.ಎಲ್ಲ ರೆಕಾರ್ಡ್ ರೂಂಗಳನ್ನು ಡಿಜಿಟಲೈಜ್ ಮಾಡಿ ಭೂ ದಾಖಲೆಗಳೊಂದಿಗೆ ಸಂಬಂಧಪಟ್ಟ ಮಾಲೀಕರ ಆಧಾರ್ ಜೋಡಣೆ ಕಾರ್ಯವನ್ನು ಆಂದೋಲನ ರೂಪದಲ್ಲಿ ಆರಂಭಿಸಲಾಗುತ್ತಿದೆ.
ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ರಾಜ್ಯಾದ್ಯಂತ ಏಕ ಕಾಲಕ್ಕೆ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.