ಶಿವಮೊಗ್ಗ: ಎನ್ ಪಿ ಎಸ್ ರದ್ದತಿಯ ಹೋರಾಟವನ್ನ ಮಾರ್ಚ್ ನಂತರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ನ್ನ ತರಬೇಕೆಂದು ಈಗ ಒಂದು ಗುಂಪು ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದೆ. ಆದರೆ 7ನೇ ಹಣಕಾಸು ಆಯೋಗ ಜಾರಿಯಾಗುವ ತನಕ ಸರ್ಕಾರಿ ನೌಕರರ ಸಂಘ ಸುಮ್ಮನಿರಲಿದೆ ಎಂದರು.
ಎನ್ ಪಿ ಎಸ್ ರದ್ದತಿಗಾಗಿ ಸರ್ಕಾರಿ ನೌಕರರು ದಿಡೀರ್ ಅಂತ ಪ್ರತಿಭಟನೆಗೆ ಕುಳಿತರೆ ಕಚೇರಿಗಳು ಬಾಗಿಲು ಹಾಕಬೇಕಾಗುತ್ತದೆ. ಕಳೆದ ಎರಡುವರೆ ವರ್ಷದಿಂದ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷನಾಗಿ ನೌಕರರ ಪರ 22 ಆದೇಶವನ್ನ ಹೊರಡಿಸಲು ಶ್ರಮಿಸಿದ್ದೇನೆ. ಯಾವ ಅಧ್ಯಕ್ಷರು ಮಾಡದ ಕೆಲಸವನ್ನ ಮಾಡಿ ತೋರಿಸಿದ್ದೇನೆ.
ಎರಡುವರೆ ವರ್ಷದಿಂದ ಈಗ ಷಡಾಕ್ಷರಿಗೆ ಎನ್ ಪಿ ಎಸ್ ನೆನಪಾಗಿದೆಯಾ ಎಂದು ಬೇರೆಯವರಿಗೆ ಅನಿಸಬಹುದು. ಎರಡುವರೆ ವರ್ಷದಿಂದ ನಾವು ಎನ್ ಪಿ ಎಸ್ ಗೆ ಮೊದಲು ಕೈಹಾಕಿದರೆ ಉಳಿದ 22 ಕೆಲಸಗಳು ಆಗ್ತಾ ಇರಲಿಲ್ಲವೆಂದು ಸ್ಪಷ್ಟಪಡಿಸಿದರು.
ಸಮಯ ಸಂದರ್ಭ ನೋಡಿಕೊಂಡು ಸಂಘ ಹೋರಾಟಕ್ಕೆ ಇಳಿಯಲಿದೆ.ಇನ್ನು ಸರ್ಕಾರಿ ಹುದ್ದೆಗಳ ಭರ್ತಿ ಬಗ್ಗೆ ಮಾತನಾಡಿ, ಸರ್ಕಾರ ಭರ್ತಿ ಮಾಡಿಕೊಳ್ಳಲು ಹೋದರೆ ನ್ಯಾಯಾಲಯಕ್ಕೆ ಹೋಗ್ತಾರೆ. ಇನ್ನು ಹೊರಗುತ್ತಿಗೆ ನೌಕರರನ್ನ ತೆಗೆದುಕೊಂಡರೆ ಏಜೆನ್ಸಿಯವರಿಂದ ಸಮಸ್ಯೆಯಾಗುತ್ತಿದೆ. ಹೊರಗುತ್ತಿಗೆ, ಏಜೆನ್ಸಿ ಮೂಲಕ ನೇಮಕಾತಿಗಳನ್ನ ರದ್ದು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವೆ ಎಂದರು.
ಈ ಹಿಂದೆ ಮಾಧ್ಯಮವೊಂದರಲ್ಲಿ ಎನ್ ಪಿ ಎಸ್ ಬಗ್ಗೆ ಸಂದರ್ಶನ ನೀಡಿದ್ದ ರಾಜ್ಯ ನೌಕರರ ಸಂಘದ ಅಧ್ಯಕ್ಷರ ಹೇಳಿಕೆ ವಿರುದ್ಧ ಭಾರಿ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಆ ಹೋರಾಟದ ಬಗ್ಗೆ ಸಂಘದ ಸ್ಪಷ್ಟ ನಿಲುವು ಹೊರಹಾಕಿದ್ದಾರೆ.