ಬೆಂಗಳೂರು: ರಾಜ್ಯದ ಶಾಲಾ – ಕಾಲೇಜುಗಳಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಸ್ತೃತ ಪೀಠದಿಂದ ಅರ್ಜಿ ವಿಚಾರಣೆ ಆರಂಭವಾಗಿದ್ದು, ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆಗೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ತ್ರಿಸದಸ್ಯಪೀಠ ಗುರುವಾರ ಮಧ್ಯಂತರ ಆದೇಶ ನೀಡಿತ್ತು. ಮುಂದಿನ ಆದೇಶದವರೆಗೆ ಶಾಲಾ – ಕಾಲೇಜುಗಳಿಗೆ ಯಾವುದೇ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಆದೇಶ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇದೀಗ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಜೆ.ಎಂ.ಖಾಜಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭಗೊಂಡಿದೆ. ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡನೆ ಆರಂಭಿಸಿದ್ದು, ಸರ್ಕಾರ ಹೊರಡಿಸಿರುವ ಸಮವಸ್ತ್ರ ಆದೇಶ ಸಂವಿಧಾನದ ವಿಧಿ 25ರ ಉಲ್ಲಂಘನೆಯಾಗಿದೆ. ಸರ್ಕಾರದ ಆದೇಶ ವಿವೇಚನಾರಹಿತವಾಗಿದೆ ಎಂದು ವಾದ ಮಂಡಿಸಿದ್ದಾರೆ.