
ಮೈಸೂರು: ವರುಣಾ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ.ಸೋಮಣ್ಣ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಸಚಿವ ವಿ.ಸೋಮಣ್ಣ ಪ್ರಚಾರಕ್ಕೆಂದು ವರುಣಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವರುಣಾ ತಾಲೂಕಿನಲ್ಲಿ ವಿ. ಸೋಮಣ್ಣ ಆಗಮಿಸುತ್ತಿದ್ದಂತೆ ಸೋಮಣ್ಣ ಕಾರನ್ನು ಅಡ್ಡಗಟ್ಟಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಪರ ಜಯ ಘೋಷಗಳನ್ನು ಕೂಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರ ವರ್ತನೆಗೆ ಸಚಿವ ವಿ. ಸೋಮಣ್ಣ ಕೆಲ ಕಾಲ ಕಂಗಾಲಾಗಿದ್ದಾರೆ.
ಕಾರಿಗೆ ಮುತ್ತಿಗೆ ಹಾಕಿ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸಿದ್ದಾರೆ.