alex Certify BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್‌ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್‌ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ

ಜಾಗತೀಕರಣ, ಬೆಳೆಯುತ್ತಿರುವ ಆರ್ಥಿಕತೆ, ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳ ಮತ್ತಷ್ಟು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಭಾರತವು ಕ್ಯಾನ್ಸರ್‌ ನಂತಹ ದೀರ್ಘಕಾಲದ ಕಾಯಿಲೆಗಳ ಸುನಾಮಿಯನ್ನೇ ಎದುರಿಸುವ ಅಪಾಯದಲ್ಲಿದೆ ಎಂದು ಅಮೆರಿಕ ಮೂಲದ ತಜ್ಞ ವೈದ್ಯರು ಎಚ್ಚರಿಸಿದ್ದಾರೆ.

ಈ ಬಗ್ಗೆ ವರದಿ ಸಹ ಪ್ರಕಟವಾಗಿದ್ದು, ಆರೋಗ್ಯ ವಿಪತ್ತುಗಳನ್ನು ತಡೆಗಟ್ಟಲು ಭಾರತ ತಂತ್ರಜ್ಞಾನ ಆಧಾರಿತ ವೈದ್ಯಕೀಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಕ್ಯಾನ್ಸರ್ ಲಸಿಕೆಗಳು, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಡಿಜಿಟಲ್ ತಂತ್ರಜ್ಞಾನದ ವಿಸ್ತರಣೆ, ದ್ರವ ಬಯಾಪ್ಸಿಗಳಿಂದ ಕ್ಯಾನ್ಸರ್ ರೋಗ ನಿರ್ಣಯ ಇವನ್ನೆಲ್ಲ ಅಳವಡಿಸಿಕೊಂಡಲ್ಲಿ ಮಾರಕ ರೋಗವನ್ನು ತಡೆಗಟ್ಟಬಹುದು ಅಂತಾ ಓಹಿಯೊ ಕ್ಲಿನಿಕ್‌ನ ಮುಖ್ಯ ಆಂಕೊಲಾಜಿಸ್ಟ್ ಡಾ. ಜೇಮ್ ಅಬ್ರಹಾಂ ಹೇಳಿದ್ದಾರೆ.

ಮನೋರಮಾ ಇಯರ್ ಬುಕ್ 2023 ರಲ್ಲಿನ ಲೇಖನವೊಂದರಲ್ಲಿ, ಡಾ. ಅಬ್ರಹಾಂ ಮೂರು ಪ್ರವೃತ್ತಿಗಳಿಗೆ ಆದ್ಯತೆ ನೀಡಿದ್ದಾರೆ. ಜೀನೋಮಿಕ್ ಪ್ರೊಫೈಲಿಂಗ್ ಬಳಕೆ, ಜೀನ್ ಎಡಿಟಿಂಗ್ ತಂತ್ರಜ್ಞಾನಗಳ ವಿಕಸನ ಮತ್ತು ಮುಂದಿನ ಪೀಳಿಗೆಯ ಇಮ್ಯುನೊಥೆರಪಿಗಳು, ಸಿಎಆರ್ ಟಿ ಸೆಲ್ ಥೆರಪಿಗಳು ಬಹುಮುಖ್ಯ ಅನ್ನೋದು ಅವರ ಅನಿಸಿಕೆ.

“ಡಿಜಿಟಲ್ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ, ಟೆಲಿಹೆಲ್ತ್,  ರೋಗಿಗಳು ಮತ್ತು ತಜ್ಞರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ದೇಶದ ಬಹುಪಾಲು ಜನಸಂಖ್ಯೆಯಿರುವ ಹಳ್ಳಿಗಳು ಸೇರಿದಂತೆ ದೂರದ ಭಾಗಗಳಲ್ಲಿ ತಜ್ಞರ ಆರೈಕೆಯ ಲಭ್ಯತೆಯನ್ನು ಹೆಚ್ಚಿಸುತ್ತದೆ” ಎಂದು ಡಾ. ಅಬ್ರಹಾಂ ತಿಳಿಸಿದ್ದಾರೆ.

ಈ ತಂತ್ರಜ್ಞಾನಗಳು ಕ್ಯಾನ್ಸರ್ ಆರೈಕೆಯಲ್ಲಿ ಕ್ರಾಂತಿ ಮಾಡಲಿವೆ. ಆದರೆ ಚಿಕಿತ್ಸೆ ಲಕ್ಷಾಂತರ ಜನರಿಗೆ ಸಿಗುವಂತೆ ಮಾಡಬೇಕಾಗಿರುವ ಹೊಣೆ ಭಾರತದ್ದು. ಇದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 2040ರ ವೇಳೆಗೆ  ಕ್ಯಾನ್ಸರ್ ಹೊರೆ 47 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಗ್ಲೋಬೋಕಾನ್ ಅಂದಾಜಿನ ಪ್ರಕಾರ, 2040 ರಲ್ಲಿ ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು 28.4 ಮಿಲಿಯನ್‌ಗೆ ತಲುಪಬಹುದು. ಜಾಗತೀಕರಣ ಮತ್ತು ಬೆಳೆಯುತ್ತಿರುವ ಆರ್ಥಿಕತೆಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳೇ ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣವಾಗಬಹುದು. 2020ರಲ್ಲಿ ಜಗತ್ತಿನಾದ್ಯಂತ ಸುಮಾರು 19.3 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು, ಕ್ಯಾನ್ಸರ್‌ಗೆ ಸಂಬಂಧಿಸಿದ 10 ಮಿಲಿಯನ್‌ ಜನರ ಸಾವು ವರದಿಯಾಗಿದೆ. ಈ ಮಾರಣಾಂತಿಕ ಕಾಯಿಲೆಗೆ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಮುಂದಿರುವ ಸವಾಲು.

ಸಂಶೋಧಕರು ಯಶಸ್ವಿಯಾಗಿ mRNA COVID-19 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ವಾಸ್ತವವೆಂದರೆ mRNA ಆಧಾರಿತ ಕ್ಯಾನ್ಸರ್ ಚಿಕಿತ್ಸಾ ಲಸಿಕೆಗಳನ್ನು ಒಂದು ದಶಕದಿಂದ ಪರೀಕ್ಷಿಸಲಾಗುತ್ತಿದೆ. ಇದರಲ್ಲಿ ಆರಂಭಿಕ ಫಲಿತಾಂಶವೂ ಸಿಕ್ಕಿದೆಯಂತೆ. ಕ್ಯಾನ್ಸರ್‌ ಚಿಕಿತ್ಸೆಯ ಜೊತೆಗೆ ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆಯೂ ಗಮನವಿರಬೇಕು ಅನ್ನೋದು ಅಬ್ರಾಹಂ ಅವರ ಅಭಿಪ್ರಾಯ. ತಂಬಾಕು, ಮದ್ಯಪಾನ, ಆಹಾರ ಮತ್ತು ಸೋಂಕುಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹಾಗಾಗಿ ತಂಬಾಕು ಮತ್ತು ಮದ್ಯಪಾನ ನಿಯಂತ್ರಣದ ನೀತಿಗಳು ರಾಷ್ಟ್ರೀಯ ಆದ್ಯತೆಯಾಗಿರಬೇಕು ಎಂದವರು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...