
ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳು ಹಿಂದು ದೇವಾಲಯಕ್ಕೆ ಹಾನಿ ಮಾಡಿದ್ದಾರೆ. ದೇವರ ವಿಗ್ರಹಗಳನ್ನು ಒಡೆದು ಹಾಕಿದ್ದಾರೆ. ಬಾಂಗ್ಲಾದೇಶದ ಬಾರಿಸಾಲ್ನ ಮೆಹೆಂದಿಗಂಜ್ ಉಪಜಿಲಾದಲ್ಲಿರುವ ಕಾಶಿಪುರ್ ಸರ್ಬಜನಿನ್ ದುರ್ಗಾ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮುಂಜಾನೆ ಈ ಕೃತ್ಯ ನಡೆದಿದೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ವಿಗ್ರಹಗಳು ವಿರೂಪಗೊಂಡಿರುವುದು ಕಂಡುಬಂದಿದೆ.
ಪೊಲೀಸರ ಪ್ರಕಾರ 2 ಗಂಟೆಯವರೆಗೂ ದೇವಾಲಯದಲ್ಲಿ ಭಕ್ತರಿದ್ದರು. ಹಾಗಾಗಿ ಮುಂಜಾನೆಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿಲ್ಲ. ಹಾಗಾಗಿ ಆದಷ್ಟು ಬೇಗ ಕ್ಯಾಮೆರಾ ಅಳವಡಿಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಅಂತಾ ಮೆಹೆಂದಿಗಂಜ್ ಪೊಲೀಸ್ ಅಧಿಕಾರಿ ಶಫೀಕುಲ್ ಇಸ್ಲಾಂ ತಿಳಿಸಿದ್ದಾರೆ.
ಕಿಡಿಗೇಡಿಗಳ ದುಷ್ಕೃತ್ಯದ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಹಿಂದುಗಳು ಒತ್ತಾಯಿಸಿದ್ದಾರೆ. ಈಗಾಗ್ಲೇ ವಿಗ್ರಹಗಳ ನವೀಕರಣಕ್ಕೆ ಅಲ್ಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ದುರ್ಗಾ ಪೂಜೆಗಾಗಿ 1,682 ಮೂರ್ತಿಗಳನ್ನು ಈಗಾಗಲೇ ಅಚ್ಚು ಮಾಡಲಾಗಿದೆ ಮತ್ತು ಪೂಜಾ ಟೆಂಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆಗಳನ್ನು ನೀಡಲಾಗಿದೆ.
ಬಾಂಗ್ಲಾದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ಬಾಂಗ್ಲಾದೇಶದ ಕೈನ್ಮರಿ ದೇವಸ್ಥಾನದಲ್ಲಿ ಹಿಂದೂ ದೇವತೆಗಳ ಪ್ರತಿಮೆಗಳಿಗೆ ಹಾನಿ ಮಾಡಿದ ಆರೋಪದ ಮೇಲೆ ಮೂವರು ಮದರಸಾ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಆಗಸ್ಟ್ 6 ರಂದು ಬಂಧಿಸಿದ್ದರು. ದೇವಸ್ಥಾನದ ಪಕ್ಕದ ಮೈದಾನದಲ್ಲಿ ಫುಟ್ಬಾಲ್ ಆಡುವುದನ್ನು ನಿಲ್ಲಿಸುವಂತೆ ಮದರಸಾದ ಮುಸ್ಲಿಂ ಯುವಕರಿಗೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದ ಬೆನ್ನಲ್ಲೇ ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ.
ಜುಲೈ 16 ರಂದು ಮುಸ್ಲಿಂ ಗುಂಪು ದೇವಸ್ಥಾನ, ಕಿರಾಣಿ ಅಂಗಡಿ ಮತ್ತು ಅನೇಕ ಹಿಂದೂ ಮನೆಗಳನ್ನು ಧ್ವಂಸಗೊಳಿಸಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಅವ್ಯಾಹತವಾಗಿ ದಾಳಿಗಳು ನಡೆಯುತ್ತಿವೆ. ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳು ಮೂಲಭೂತ ಇಸ್ಲಾಮಿಕ್ ಭಯೋತ್ಪಾದಕರ ದಾಳಿಗೆ ಗುರಿಯಾಗುತ್ತಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಕಿರುಕುಳ ಮತ್ತು ದೌರ್ಜನ್ಯದಂತಹ ನೂರಾರು ಪ್ರಕರಣಗಳು ವರದಿಯಾಗಿವೆ.