ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದು ತಪ್ಪು. ಒಂದು ವೇಳೆ ನಾವು ಸಿ.ಟಿ. ರವಿ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದರೆ ಅವರು ಹೊರ ಬರಲು ಆಗಲ್ಲ ಎಚ್ಚರ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ರಾಜಕೀಯವಾಗಿ ಮಾತ್ರ ಮಾತನಾಡಿ. ಆದರೆ ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸಿದ್ದರಾಮೇಶ್ವರ ದೇವರಿಂದ ಸಿದ್ದರಾಮಯ್ಯ ಹೆಸರು ಬಂದಿದೆ ಎಂದರು.
ಡಿ.ಕೆ. ಶಿವಕುಮಾರ್ ವಿರುದ್ಧವೂ ಸಿ.ಟಿ. ರವಿ ಮಾತನಾಡುತ್ತಿದ್ದಾರೆ. ಕೊತ್ವಾಲ್ ನ ಶಿಷ್ಯ ಎಂಬ ಪದ ಬಳಕೆ ಸರಿಯಲ್ಲ, ಸಿ.ಟಿ. ರವಿ ಅವರು ವಿವಾದಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಗುಡುಗಿದರು.