ಬೆಳಗಾವಿ: ಹಿಂದೂ ಪದ ಅತ್ಯಂತ ಅಶ್ಲೀಲ ಪದ ಎಂದು ವಿವಾದ ಸೃಷ್ಟಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ತಾವು ಕ್ಷಮೆ ಕೇಳುವುದಿಲ್ಲ. ತಮ್ಮ ಹೇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಅವರು ಸಮಿತಿ ರಚಿಸಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಹಿಂದೂ ಎಂಬ ಪದ ಪರ್ಷಿಯನ್ ನಲ್ಲಿ ಅಶ್ಲೀಲ ಪದ ಎಂದು ಹೇಳಿದ್ದೇನೆ. ಹೇಳಿಕೆ ತಪ್ಪಿದ್ದರೆ ಕ್ಷಮೆಯಲ್ಲ, ರಾಜೀನಾಮೆಯನ್ನೇ ನೀಡುತ್ತೇನೆ. ಸತ್ಯ ಹೇಳುವುದೇ ಅಪರಾಧ ಎಂಬಂತಾಗಿದೆ. ಅಶ್ಲೀಲ ಅಂತ ಡಿಕ್ಷನರಿಯಲ್ಲಿದೆ. ಹೊರತು ನಾನು ಬರೆದಿದ್ದೀನಾ? ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಅರೆಬರೆ ಓದಿಕೊಂಡವ ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ. ನಾನು ಅರೆಬರೆ ಓದಿಕೊಂಡಿಲ್ಲ. 30 ವರ್ಷಗಳಿಂದ ನಿರಂತರವಾಗಿ ಓದುತ್ತಲೇ ಇದೇನೆ. ಈಗ ಸಿಎಂ ಬೊಮ್ಮಾಯಿ ಅವರದ್ದೇ ಸರ್ಕಾರ ಇದೆ. ನಾನು ಹೇಳಿದ ಪದಗಳ ಬಗ್ಗೆ ತನಿಖೆ ಮಾಡಲಿ. ತಪ್ಪು ಎಂದು ಸಾಬೀತಾದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.