
ರಾಯಚೂರು: ಗೃಹಲಕ್ಷ್ಮಿ ಯೋಜನೆಗೆ ಖಾಸಗಿ ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಹಣ ಪಡೆದು ಅರ್ಜಿ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಸೈಬರ್ ಕೇಂದ್ರಗಳ ವಿರುದ್ಧ ಪ್ರಕರಣ ದಾಖಲಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ಮಾನ್ವಿ ತಾಲೂಕಿನ ಮೂರು ಖಾಸಗಿ ಸೈಬರ್ ಕೇಂದ್ರಗಳಲ್ಲಿ 100-200 ರೂಪಾಯಿ ಹಣ ಪಡೆದು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸರ್ಕಾರದ ಐಡಿ ಹೆಸರಲ್ಲಿ ಅಕ್ರಮವಾಗಿ ಅರ್ಜಿ ಸಲ್ಲಿಸುತ್ತಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮೂರು ಸೈಬರ್ ಕೇಂದ್ರಗಳನ್ನು ತಹಶೀಲ್ದಾರ್ ಸೀಜ್ ಮಾಡಿ, ಮಾನ್ವಿ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ತಹಶೀಲ್ದಾರ್ ದೂರಿನ ಆಧಾರದ ಮೇಲೆ 3 ಖಾಸಗಿ ಸೈಬರ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.