ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗಮನ ಸೆಳೆದ ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದು. ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರೀತಂ ಗೌಡ ಇಲ್ಲಿ ಪರಾಭವಗೊಂಡಿದ್ದು, ಜೆಡಿಎಸ್ ನ ಸ್ವರೂಪ್ ಜಯಭೇರಿ ಬಾರಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿಯವರೂ ಕಣಕ್ಕಿಳಿಯಲು ಮುಂದಾಗಿದ್ದರಾದರೂ ಸಾಮಾನ್ಯ ಅಭ್ಯರ್ಥಿ ಸ್ವರೂಪ್ ಅವರಿಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದರು.
ಪ್ರೀತಂ ಗೌಡ, ಹೆಚ್.ಡಿ. ರೇವಣ್ಣನವರಿಗೆ ಸವಾಲು ಒಡ್ಡಿದ್ದ ಕಾರಣ ಹಠಕ್ಕೆ ಬಿದ್ದಿದ್ದ ಅವರ ಕುಟುಂಬ, ಭವಾನಿಯವರನ್ನು ಕಣಕ್ಕಿಳಿಸಲು ಮುಂದಾಗಿತ್ತು. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ವರೂಪ್ ಕಣಕ್ಕಿಳಿದ ಬಳಿಕವೂ ಪ್ರೀತಂ ಗೌಡ ಅವರ ಸವಾಲನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ರೇವಣ್ಣ ಹಾಗೂ ಅವರ ಕುಟುಂಬ ಅಂತಿಮವಾಗಿ ಸ್ವರೂಪ್ ಅವರನ್ನು ಗೆಲುವಿನ ದಡ ಮುಟ್ಟಿಸಿದೆ.