ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಪಟ್ಟಣದ ಹೊರವಲಯದಲ್ಲಿರುವ ಹೆಲಿಪ್ಯಾಡ್ ನಲ್ಲಿ ಯಡಿಯೂರಪ್ಪನವರಿದ್ದ ಹೆಲಿಕ್ಯಾಪ್ಟರ್ ಲ್ಯಾಂಡ್ ಮಾಡಲು ಪೈಲೆಟ್ ಮುಂದಾದ ವೇಳೆ ಸುತ್ತಮುತ್ತ ಬಯಲಲ್ಲಿ ಇದ್ದ ಪ್ಲಾಸ್ಟಿಕ್ ಚೀಲ, ಕಸಕಡ್ಡಿ ಮೇಲೆ ಹಾರಿದೆ.
ಇದರಿಂದ ತಕ್ಷಣವೇ ಎಚ್ಚೆತ್ತ ಪೈಲೆಟ್ ಹೆಲಿಕ್ಯಾಪ್ಟರ್ ವಾಪಸ್ ಮೇಲೆ ಹಾರಿಸಿದ್ದು, ಸ್ಥಳದಲ್ಲಿದ್ದವರು ಪ್ಲಾಸ್ಟಿಕ್ ಚೀಲ ಸೇರಿದಂತೆ ಕಸ ಕಡ್ಡಿ ತೆರವುಗೊಳಿಸಿದ ಬಳಿಕ ಸುರಕ್ಷಿತವಾಗಿ ಹೆಲಿಕಾಪ್ಟರ್ ಇಳಿದಿದೆ.
ಯಡಿಯೂರಪ್ಪನವರ ಭೇಟಿ ನೀಡುವ ವಿಷಯ ಗೊತ್ತಿದ್ದರೂ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಕುರಿತು ಈಗ ಟೀಕೆ ವ್ಯಕ್ತವಾಗುತ್ತಿದೆ.
ಹೆಲಿಪ್ಯಾಡ್ ಸುತ್ತಮುತ್ತಲಿನ ಜಮೀನಿನವರು ತಮ್ಮ ಹೊಲಗದ್ದೆಗಳ ಬಳಿ ಗೊಬ್ಬರದ ಚೀಲ ಸೇರಿದಂತೆ ಇತರೆ ಪ್ಲಾಸ್ಟಿಕ್ ಹಾಕಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.