
ಬೆಂಗಳೂರಿನ ಜನಪ್ರಿಯ ತಾಣವಾದ ʼಸೆಲೆಕ್ಟ್ ಬುಕ್ಶಾಪ್ʼ ನ ಮಾಲೀಕ ಕೆಕೆಎಸ್ ಮೂರ್ತಿ (94) ವಯೋಸಹಜ ಕಾಯಿಲೆಗಳಿಂದ ಸೋಮವಾರ ನಿಧನರಾದರು. ಮೂರ್ತಿ ಅವರು ತಮ್ಮ ಪುತ್ರ 61 ವರ್ಷದ ಸಂಜಯ್ ಅವರನ್ನು ಅಗಲಿದ್ದಾರೆ.
ಮೂರ್ತಿ ಅವರ ಪುತ್ರ ಕೆ ಸಂಜಯ್ ಈ ವಿಷಯವನ್ನು ತಿಳಿಸಿದ್ದು, ಕಳೆದ ಮೂರು ತಿಂಗಳಿಂದ ಮೂರ್ತಿ ಅವರ ಆರೋಗ್ಯ ಹದಗೆಟ್ಟಿದ್ದು, ಸ್ಮರಣ ಶಕ್ತಿ ಕುಂದಿತ್ತು, ಆಹಾರ ಸೇವನೆ ಕಡಿಮೆಯಾಗಿತ್ತು ಮತ್ತು ದೈಹಿಕವಾಗಿ ದುರ್ಬಲರಾಗಿದ್ದರು ಎಂದು ಹೇಳಿದ್ದಾರೆ.
ಸೆಲೆಕ್ಟ್ ಬುಕ್ಶಾಪ್ ಬೆಂಗಳೂರಿನಲ್ಲಿ ಬಹಳ ಪ್ರಸಿದ್ಧವಾಗಿದ್ದು, ಇದನ್ನು 1945 ರಲ್ಲಿ ಮೂರ್ತಿ ಅವರ ತಂದೆ ಕೆಬಿಕೆ ರಾವ್ ಸ್ಥಾಪಿಸಿದ್ದು, ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಈ ಅಂಗಡಿ ಮ್ಯೂಸಿಯಂ ರಸ್ತೆಯ ಗ್ಯಾರೇಜ್ನಲ್ಲಿ ಪ್ರಾರಂಭವಾಗಿ 1984 ರಲ್ಲಿ ಬ್ರಿಗೇಡ್ ರಸ್ತೆಯ ಬಳಿ ತನ್ನ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿತು. ಆಗ ಮೂರ್ತಿ ಅವರು ಅಂಗಡಿಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಮೂರ್ತಿ ಅವರು ವಾಯುಯಾನ ಎಂಜಿನಿಯರಿಂಗ್ನಲ್ಲಿನ ವೃತ್ತಿಜೀವನವನ್ನು ತೊರೆದು ಪುಸ್ತಕದಂಗಡಿಯನ್ನು ನೋಡಿಕೊಳ್ಳಲು ತಮ್ಮನ್ನು ತೊಡಗಿಸಿಕೊಂಡರು. ಈ ಅಂಗಡಿ ಅಪರೂಪದ ಮತ್ತು ವಿಂಟೇಜ್ ಪುಸ್ತಕಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ 15 ನೇ ಶತಮಾನದ ಕೆಲವು ಪುಸ್ತಕಗಳು ಸೇರಿದಂತೆ 9,000 ಅಪರೂಪದ ಪುಸ್ತಕಗಳಿವೆ.
ಮೂರ್ತಿ ಅವರು ವಿದೇಶಗಳಲ್ಲಿ ವಾಯುಯಾನ ಎಂಜಿನಿಯರ್ ಆಗಿ ಕೆಲಸ ಮಾಡುವಾಗ “ಅಪರೂಪದ ಪುಸ್ತಕಗಳನ್ನು ಹುಡುಕುವ ಸಾಹಸ”ದ ಬಗ್ಗೆ ಮಕ್ಕಳಂತೆ ಉತ್ಸಾಹದಿಂದ ಮಾತನಾಡುತ್ತಿದ್ದರು. “ನಾನು ಫ್ರಾನ್ಸ್, ಯುಎಸ್, ಸ್ಪೇನ್ನಲ್ಲಿರುವ ಡೀಲರ್ಗಳು, ಫುಟ್ಪಾತ್ ಅಂಗಡಿಗಳು ಮತ್ತು ಹರಾಜುದಾರರಿಂದ ನನ್ನ ತಂದೆಯ ಅಂಗಡಿಗಾಗಿ ಅಪರೂಪದ ಪುಸ್ತಕಗಳನ್ನು ಖರೀದಿಸುತ್ತಿದ್ದೆ” ಎಂದು ಮೂರ್ತಿ ಒಮ್ಮೆ ಹೇಳಿದ್ದರು. ಮೂರ್ತಿ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ.