
ಬೆಳಗಾವಿ: ಹೋಟೆಲ್ ನಲ್ಲಿ ಕುಕ್ಕರ್ ಸ್ಫೋಟಗೊಂಡು 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಸವದತ್ತಿಗೆ ದೇವರ ದರ್ಶನಕ್ಕೆಂದು ಬಂದಿದ್ದ ಭಕ್ತರು ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾದಗಿರಿಯ ಐವರು ಹಾಗೂ ಬೆಂಗಳೂರಿನ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ಸವದತ್ತಿ ಪಟ್ಟಣದ ಹೋಟೆಲ್ ರೂಂ ನಲ್ಲಿ ತಂಗಿದ್ದರು. ಈ ವೇಳೆ ಹೋಟೆಲ್ ರೂಂ ನಲ್ಲಿ ಹೋಳಿಗೆ ಮಾಡಲೆಂದು ಕುಕ್ಕರ್ ನಲ್ಲಿ ಬೇಳೆ ಇಟ್ಟಿದ್ದಾರೆ. ಆದರೆ ಬೇಳೆಗೆ ನೀರು ಹಾಕಿ ಇಡುವುದನ್ನು ಮರೆತಿದ್ದಾರೆ. ಈ ವೇಳೆ ಕುಕ್ಕರ್ ಏಕಾಏಕಿ ಸ್ಫೋಟಗೊಂಡು, ಹೋಟೆಲ್ ಗೆ ಬೆಂಕಿ ಆವರಿಸಿದೆ. ಘಟನೆಯಲ್ಲಿ 9 ಜನರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳಲ್ಲಿ 6 ಜನರನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.