
ಬೆಂಗಳೂರು: ಪುಣ್ಯಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿ, ಸ್ನಾನಘಟ್ಟಗಳ ಸಮೀಪ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂಗಳ ಮಾರಾಟ ನಿಷೇಧಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಅವರು ಈ ಕುರಿತಾಗಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪುಣ್ಯಕ್ಷೇತ್ರಗಳ ಬಳಿ ಇರುವ ಜಲಮೂಲಗಳಲ್ಲಿ ಭಕ್ತರು, ಪ್ರವಾಸಿಗರು ಸ್ನಾನ ಮಾಡಿ ಉಳಿದ ಶಾಂಪೂ, ಸೋಪಿನ ಸ್ಯಾಷೆಗಳನ್ನು ಎಸೆಯುತ್ತಾರೆ. ಇದರಿಂದ ಅಲ್ಲಿನ ಪರಿಸರದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತದೆ. ಈ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಜಲಮೂಲ ಸೇರಿ ನೀರು ಕಲುಷಿತವಾಗಿ ಜಲಚರಗಳು ಸಾಯುತ್ತವೆ. ಈ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರಗಳ ಬಳಿ ಇರುವ ಅಂಗಡಿಗಳಲ್ಲಿ ಒಂದೆರಡು ರುಪಾಯಿಯ ಶಾಂಪೂ ಮತ್ತು ಐದರಿಂದ ಹತ್ತು ರೂಪಾಯಿಯ ಸೋಪಿನ ಪ್ಯಾಕೆಟ್ ಗಳ ಮಾರಾಟ ನಿಷೇಧಿಸಬೇಕೆಂದು ಪತ್ರ ಬರೆದಿದ್ದಾರೆ.