
ವೈರಲ್ ಆಗಿರುವ ವಿಡಿಯೋದಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದಿದ್ದ ವ್ಯಕ್ತಿಯು ಪ್ರತಿಭಟನಾಕಾರನ ದೇಹದ ಮೇಲೆಯೇ ಹಾರಿದ್ದಾನೆ. ಆಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದ್ದು ಪೊಲೀಸರ ಜೊತೆ ಗುಂಪೊಂದು ಸಂಘರ್ಷ ನಡೆಸಿದೆ. ಜಟಾಪಟಿಯಲ್ಲಿ ಇಬ್ಬರು ಮೃತಪಟ್ಟಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಕ್ಯಾಮರಾಮ್ಯಾನ್ ವ್ಯಕ್ತಿಯೊಬ್ಬನ ಎದೆಯ ಮೇಲೆ ಒದ್ದಿದ್ದಾನೆ.
ಈ ಘಟನೆಯ ಬಳಿಕ ಆಸ್ಸಾಂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ಪ್ರಚೋದನೆಯಿಂದಲೇ ಪೊಲೀಸರು ಈ ರೀತಿ ವರ್ತಿಸಿದ್ದಾರೆ ಎಂದು ಕುಟುಕಿದ್ದಾರೆ. ನಮ್ಮ ಸಹೋದರ ಹಾಗೂ ಸಹೋದರಿಯರ ಜೊತೆ ನಾವಿದ್ದೇವೆ. ಭಾರತದ ಯಾವುದೇ ಮಕ್ಕಳು ಈ ರೀತಿ ಶಿಕ್ಷೆ ಅನುಭವಿಸಲು ಸಾಧ್ಯವಿಲ್ಲ ಎಂದು ಟ್ವೀಟಾಯಿಸಿದ್ದಾರೆ.