
ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನ ಬಹಳ ಪ್ರಸಿದ್ದವಾದ ದೇವಸ್ಥಾನವಾಗಿದೆ. ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ. ಸಹಸ್ರಾರು ಭಕ್ತರು ಈ ದೇವಸ್ಥಾನದ ಸೊಬಗನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಾರೆ.
ಅಂದ ಹಾಗೇ, ಈಗಿನ ತಿರುವಣ್ಣಾಮಲೈಗೆ ಅರುಣಗಿರಿ ಎಂಬ ಹೆಸರೂ ಇದೆ. ವಿಳ್ಳುಪುರಂ-ಕಾಟ್ಪಾಡಿ ರೈಲು ಮಾರ್ಗದಲ್ಲಿ ಈ ಪುಣ್ಯಕ್ಷೇತ್ರವಿದೆ. ಪಂಚ ಮಹಾಲಿಂಗಗಳಲ್ಲಿ ಒಂದಾದ ಜ್ಯೋತಿರ್ಲಿಂಗ ಇಲ್ಲಿದೆ.
ಇಲ್ಲಿ ಶಿವಲಿಂಗದ ಜೊತೆಗೆ ಪಾರ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ದೇವಸ್ಥಾನವನ್ನು ಅಗ್ನಿ ಪ್ರತೀಕವೆಂದು ಭಾವಿಸಲಾಗುತ್ತದೆ ಮತ್ತು ಶಿವನನ್ನು ಅಗ್ನಿ ಲಿಂಗವೆಂದು ಕರೆಯುತ್ತಾರೆ.
ದೇಶದಲ್ಲಿಯೇ ಅತಿ ದೊಡ್ಡ ದೇವಸ್ಥಾನ ಇದಾಗಿದ್ದು ಸುಮಾರು 10 ಹೆಕ್ಟೇರ್ ನಷ್ಟು ಸ್ಥಳದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅದ್ಭುತವಾದ ನಾಲ್ಕು ಗೋಪುರಗಳಿವೆ. ಪೂರ್ವದಲ್ಲಿರುವ ಗೋಪುರ 66 ಮೀಟರ್ ಎತ್ತರವಿದ್ದು ಭಾರತದ ಎತ್ತರದ ಗೋಪುರವೆಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದೆ.