ಬಳ್ಳಾರಿ : ಮಹಾನಗರ ಪಾಲಿಕೆ ವತಿಯಿಂದ 2023-24ನೇ ಸಾಲಿನ ಶೇ.24.10ರ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆ, ಶೇ.7.25 ಮತ್ತು ಶೇ.5ರ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಅಲ್ಪಸಂಖ್ಯಾತ ಬಡ ಜನಾಂಗದವರಿಗೆ ವಿವಿಧ ಸೌಲಭ್ಯ ನೀಡಲು ಅನುಮೋದನೆಯಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.24.10 ಹಾಗೂ ಶೇ.7.25ರ ಯೋಜನೆಯಡಿಯ ಸೌಲಭ್ಯಗಳು. ಬಿ.ಇ ಮತ್ತು ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಅಲ್ಪಸಂಖ್ಯಾತ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಡೆಸ್ಕ್ಟಾಪ್ ಖರೀದಿಗಾಗಿ ಒಬ್ಬರಿಗೆ ರೂ.50 ಸಾವಿರ ಮೀರದಂತೆ ಖರೀದಿಸಿ ನೀಡಲಾಗುವುದು.ವಿಕಲಚೇತನ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಶೇ.5ರ ಯೋಜನೆಯಡಿ ಸೌಲಭ್ಯಗಳು: ವಿಕಲಚೇತನ ಸ್ವಯಂ ಉದ್ಯೋಗಕ್ಕಾಗಿ ವಿದ್ಯುತ್ ಚಾಲಿತ ಆಟೋ ವಾಹನ, ವಿಕಲಚೇತನ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ನೀಡಲಾಗುವುದು.
ಸೌಲಭ್ಯಗಳವಾರು ಪ್ರತ್ಯೇಕವಾಗಿರುವ ಅರ್ಜಿಗಳನ್ನು ಪಡೆದುಕೊಂಡು, ಅರ್ಜಿಗಳಲ್ಲಿ ನಮೂದಿಸಲಾದ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳು ಫೆ.05 ರೊಳಗೆ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಅಥವಾ ದೂ.08392-273479/278158 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.