ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಿದ ‘ಶಕ್ತಿ ಯೋಜನೆ’ ವಿರುದ್ಧ ಆಟೋ, ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದಾರೆ. ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸರ್ಕಾರ ಪ್ರತಿ ತಿಂಗಳು 10 ಸಾವಿರ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ಜು.28ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಕರ್ಯ ಕಲ್ಪಿಸಿರುವುದರಿಂದ ಆಟೋ ಚಾಲಕರು ನಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಭರವಸೆ ನೀಡಿದ್ದಂತೆ ರ್ಯಾಪಿಡ್ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು, ಅಸಂಘಟಿತ ವಾಣಿಜ್ಯ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ರಹದಾರಿ ನೀಡಬೇಕು. ಇಲ್ಲದಿದ್ದರೆ ಜು.28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಆಟೋ ಚಾಲಕರು ಹೇಳಿದ್ದಾರೆ.
ಉಚಿತ ಪ್ರಯಾಣ ಯೋಜನೆಯಿಂದ ನಮಗೆ ಬಹಳ ತೊಂದರೆಯಾಗಿದೆ. ಮೊದಲು ನಮಗೆ ಮಹಿಳಾ ಪ್ರಯಾಣಿಕರು ಹೆಚ್ಚಿರುತ್ತಿದ್ದರು. ಆದರೆ ಸರ್ಕಾರ ಉಚಿತ ಬಸ್ ಸೇವೆ ಕೊಟ್ಟ ಮೇಲೆ ಯಾರೂ ಆಟೋ ಹತ್ತುತ್ತಿಲ್ಲ. ಸರ್ಕಾರಿ ಬಸ್ ಗಳು ರಶ್ ಆಗಿ ಓಡಾಡುತ್ತಿದೆ, ಆದರೆ ಆಟೋ ಖಾಲಿಯಾಗಿ ಓಡಾಡುತ್ತಿದೆ.ಆಟೋ ಚಾಲಕರ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ ಬೀರಿದ್ದು, ಶಕ್ತಿ ಯೋಜನೆ ಬಾಡಿಗೆ ಇಲ್ಲದೇ ಕಂಗಾಲಾದ ಆಟೋ ಚಾಲಕರು, ಅನಿವಾರ್ಯವಾಗಿ ಆಟೋ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.