
ವಿಧಾನಸಭಾ ಚುನಾವಣೆಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಹಲವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿರುವ ಮಧ್ಯೆ ಚೈತ್ರಾ ಗ್ಯಾಂಗಿನ ಒಂದೊಂದೇ ಡ್ರಾಮಾಗಳು ಬಹಿರಂಗವಾಗುತ್ತಿವೆ.
ಪೊಲೀಸರಿಗೆ ದೂರು ಕೊಡುವ ಮೊದಲೇ ತಾವು ವಂಚನೆಗೊಳಗಾಗಿರುವುದನ್ನು ಅರಿತಿದ್ದ ಗೋವಿಂದ ಬಾಬು ಪೂಜಾರಿ, ಚೈತ್ರಾ ಕುಂದಾಪುರ, ಗಗನ್ ಕಡೂರು ಅವರುಗಳನ್ನು ಬೆಂಗಳೂರಿನ ತಮ್ಮ ಬೊಮ್ಮನಹಳ್ಳಿ ಕಚೇರಿಗೆ ಕರೆಯಿಸಿಕೊಂಡು ಮಾತುಕತೆ ನಡೆಸುತ್ತಿದ್ದ ವೇಳೆ ಗಗನ್, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿರುವ ಸಿಸಿ ಟಿವಿ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋವಿಂದ ಪೂಜಾರಿ ಮಾತನಾಡುವ ವೇಳೆ ತಾನು ಸಾಯಲು ಸಿದ್ಧವಾಗಿಯೇ ಬಂದಿದ್ದೇನೆ ಎಂದು ಹೇಳುವ ಗಗನ್ ಕಡೂರು, ತನ್ನ ಬ್ಯಾಗಿನಿಂದ ಬಾಟಲಿ ಒಂದನ್ನು ತೆರೆದು ಅದರಲ್ಲಿದ್ದ ದ್ರವವನ್ನು ಕುಡಿಯಲು ಮುಂದಾಗಿದ್ದಾನೆ. ಕೂಡಲೇ ಅಲ್ಲಿದ್ದವರು ಅವನ ಪ್ರಯತ್ನವನ್ನು ವಿಫಲಗೊಳಿಸಿದ್ದು, ಚೈತ್ರಾ ಕೂಡ ಗಗನ್ ವಿಷ ಕುಡಿಯುವ ನಾಟಕವನ್ನು ಕಂಡು ಗಾಬರಿಗೊಂಡಂತೆ ನಟಿಸಿದ್ದಾಳೆ. ಯಾವಾಗ ಮಾತುಕತೆಗಳು ವಿಫಲವಾಗಿ ತಮ್ಮ ಹಣ ಮರಳಿ ಬರುವುದಿಲ್ಲವೆಂಬುದನ್ನು ಮನಗಂಡ ಗೋವಿಂದ ಬಾಬು ಪೂಜಾರಿ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದರೆನ್ನಲಾಗಿದೆ.