
ಕೋವಿಡ್ ಲಾಕ್ ಡೌನ್ ದೇಶದ ಹಳ್ಳಿ ಹಳ್ಳಿಯಲ್ಲಿ ನಡೆದಿತ್ತು. ಆದರೆ ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರು ಏಪ್ರಿಲ್ 17ರಿಂದ 25ರವರೆಗೆ ತಮ್ಮ ಗ್ರಾಮದಲ್ಲಿ ಲಾಕ್ ಡೌನ್ ಘೋಷಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಆಂಧ್ರದ ಶ್ರೀಕಾಕುಳಂನ ಸರುಬುಜ್ಜಿಲಿ ಮಂಡಲದ ಗ್ರಾಮಸ್ಥರು ದಿಗ್ಭಂಧನ ಹಾಕಿಕೊಂಡು ಸುದ್ದಿಯಾಗಿದ್ದಾರೆ. ಇದಕ್ಕವರು ದುಷ್ಟಶಕ್ತಿಗಳು ಗ್ರಾಮವನ್ನು ಸುತ್ತುವರೆದಿವೆ ಎಂಬ ಕಾರಣ ಕೊಟ್ಟುಕೊಂಡಿದ್ದಾರೆ.
ಅಂದದ ಮುಖಕ್ಕೆ ಇಲ್ಲಿದೆ ಸಿಂಪಲ್ ‘ಮಸಾಜ್’
ಹಿಂದೆ ನಮ್ಮ ಪೂರ್ವಜರು ಆಚರಣೆಗಳನ್ನು ಮಾಡುತ್ತಿದ್ದರು, ಕಳೆದ 20 ವರ್ಷಗಳಿಂದ ಎಲ್ಲವೂ ಸರಿಯಾಗಿತ್ತು. ಇತ್ತೀಚೆಗೆ ಸುಮಾರು ಐದು ಜನರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ. ಒಬ್ಬ ಹಳ್ಳಿಯ ಮುಖ್ಯಸ್ಥ ಕೂಡ ಇದ್ದಕ್ಕಿದ್ದಂತೆ ನಿಧನರಾದರು. ನಮಗೆ ಭಯವಾಯಿತು. ಅವರ ಮರಣದ ನಂತರ ಮಾಂತ್ರಿಕನ ಬಳಿಗೆ ಹೋದಾಗ ಗ್ರಾಮ ಸುರಕ್ಷಿತವಾಗಿಲ್ಲ, ಕೆಲವು ಆಚರಣೆ ಮಾಡುವಂತೆ ಸೂಚಿಸಿದ್ದರು ಎಂದು ಹಳ್ಳಿಗರು ಹೇಳಿಕೊಂಡಿದ್ದಾರೆ.
ಯಾರೂ ಕೂಡ ಗ್ರಾಮದಿಂದ ಹೊರಗೆ ಹೋಗದಂತೆ ಸೂಚನೆ ನೀಡಿದ್ದು, ಕೆಲವು ರಾಕ್ಷಸ ಶಕ್ತಿಗಳು ಸುತ್ತುವರೆದಿವೆ ಎಂದು ಕೆಲವು ಪ್ರಮುಖರು ಎಚ್ಚರಿಸಿದ್ದರು.
ನಾವು ಆಚರಣೆ ಮಾಡಲು ವ್ಯವಸ್ಥೆ ಮಾಡಿದ್ದು, ಯಾರಿಗೂ ತೊಂದರೆಯಾಗದಂತೆ ಗ್ರಾಮವನ್ನು ಲಾಕ್ ಮಾಡಲಾಗಿತ್ತು. ವಿಜಯನಗರಂ ಗ್ರಾಮದಿಂದ ಮಾಟಗಾರರು ಬಂದಿದ್ದರು. ಕೋವಿಡ್ ಲಾಕ್ ಡೌನ್ ಮಾದರಿಯಂತೆ ಅದೇ ರೀತಿ ಲಾಕ್ ಮಾಡಿಕೊಂಡೆವು ಎಂದು ಆ ಗ್ರಾಮದವರು ತಿಳಿಸಿದ್ದಾರೆ.
17ರಂದು ದಿಗ್ಭಂಧನ ಘೋಷಿಸಿಕೊಂಡ ಬಳಿಕ ಎರಡು ದಿನಗಳ ಬಳಿಕ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ತಲುಪಿ, ಎಚ್ಚರಿಕೆ ನೀಡಿದರು.
ಶ್ರೀಕಾಕುಳಂ ಪೊಲೀಸ್ ವರಿಷ್ಠಾಧಿಕಾರಿ ಜಿ.ಆರ್.ರಾಧಿಕಾ ಈ ಬಗ್ಗೆ ಮಾತನಾಡಿ, ಗ್ರಾಮದಲ್ಲಿ ಲಾಕ್ಡೌನ್ ತೆಗೆದುಹಾಕಲಾಗಿದೆ, ನಾವು ಗ್ರಾಮಕ್ಕೆ ಹೋಗಿ ಸಲಹೆ ನೀಡಿದ್ದೇವೆ. ಇಂತಹ ಮೂಢನಂಬಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದರು.
ಗ್ರಾಮಸ್ಥರು ಎರಡು ದಿನಗಳ ಕಾಲ ಕೆಲವು ವಿಧಿವಿಧಾನಗಳನ್ನು ನೆರವೇರಿಸಿ ಗ್ರಾಮವನ್ನು ಲಾಕ್ ಮಾಡಿದ್ದರು. ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣನೆರವೇರಿಸುವವರೆಗೂ ಗ್ರಾಮದಿಂದ ಹೊರಗೆ ಹೋಗುವುದನ್ನು ಕಡ್ಡಾಯ ನಿರ್ಬಂಧಿಸಿಕೊಂಡಿದ್ದರು.