
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪ್ರಸ್ತಾವಿತ ಏರ್ ಸ್ಟ್ರಿಪ್ ನಿರ್ಮಾಣ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳು ಗುರುವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಧರ್ಮಸ್ಥಳದಲ್ಲಿ 4 ಹೆಲಿಕಾಪ್ಟರ್ ಗಳು ಏಕಕಾಲದಲ್ಲಿ ಲ್ಯಾಂಡಿಂಗ್ ಆಗಲು ಅವಕಾಶವಿರುವ ಲಘು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯಸಭೆ ಸದಸ್ಯ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದು, ಅವರ ಮನವಿಯಂತೆ ಯೋಜನೆ ಕಾರ್ಯಗತಕ್ಕೆ ಉದ್ದೇಶಿಸಲಾಗಿದೆ.
ಮೊದಲ ಹಂತದಲ್ಲಿ ಉಡಾನ್ ಯೋಜನೆ ಅಡಿ 100 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವಿ. ಸೋಮಣ್ಣ ಘೋಷಿಸಿದ್ದರು. ವಿಮಾನ ನಿಲ್ದಾಣ ನಿರ್ಮಾಣಕ್ಕೆ 100 ಎಕರೆ ಜಾಗ ಬೇಕಾಗಿದೆ. ಲಾಯಿಲ ಮತ್ತು ಮೇಲಂತಬೆಟ್ಟು ಬಳಿ 100 ಎಕರೆ, ಧರ್ಮಸ್ಥಳ ಮತ್ತು ಕಲ್ಮಂಜ ಗ್ರಾಮಕ್ಕೆ ಸೇರಿದ ನೀರುಚಿಲುಮೆ ಬಳಿ 45 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ.
ವಿಮಾನ ನಿಲ್ದಾಣ ಯೋಜನೆಯ ಮುಂದಿನ ಹಂತ ಪರಿಶೀಲನೆಗಾಗಿ ಆಗಮಿಸಿದ್ದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.