
ಯುಗಾದಿ ಸಂದರ್ಭದಲ್ಲಿ ಜೂಜಾಟ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮಂಡ್ಯ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು, ಜೂಜಾಟ ಆಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಏಪ್ರಿಲ್ 9 ರಂದು ನಡೆಯುವ ಯುಗಾದಿ ಆಚರಣೆ ಸಂದರ್ಭದಲ್ಲಿ ವಸತಿಗೃಹ, ಹೋಟೆಲ್, ಕ್ಲಬ್, ತೋಟದ ಮನೆಗಳು, ಕಲ್ಯಾಣ ಮಂಟಪ ಹಾಗೂ ಇನ್ನಿತರ ಸ್ಥಳಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಟ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ಜೂಜಾಟಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಹಕಾರ ನೀಡುವುದು, ಶಾಮಿಯಾನ, ಮನೆ ಅಥವಾ ಲಾಡ್ಜ್ ಗಳನ್ನು ಬಾಡಿಗೆಗೆ ನೀಡುವುದು ಕಂಡುಬಂದಲ್ಲಿ ಜೂಜುಕೋರರ ಜೊತೆ ಮಾಲೀಕರ ವಿರುದ್ಧವೂ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
