
ಹೈದರಾಬಾದ್ನಲ್ಲಿ ವೃದ್ಧರೊಬ್ಬರ ಭೀಕರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಮೊಮ್ಮಗನೇ ತನ್ನ ಅಜ್ಜನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ವ್ಯಕ್ತಿ ಪ್ರಮುಖ ಕೈಗಾರಿಕೋದ್ಯಮಿ ವೇಲಮಾಟಿ ಚಂದ್ರಶೇಖರ್ ಜನಾರ್ದನ್ ರಾವ್ (86) ಎಂದು ತಿಳಿದುಬಂದಿದೆ. ಆರೋಪಿ ಅವರ ಮೊಮ್ಮಗ ಕೀರ್ತಿ ತೇಜ.
ಜನಾರ್ದನ್ ರಾವ್ ಅವರು ವೇಲಜನ್ ಗ್ರೂಪ್ ಆಫ್ ಕಂಪೆನಿಗಳ ಮುಖ್ಯಸ್ಥರಾಗಿದ್ದರು. ಹೈದರಾಬಾದ್ನ ಸೋಮಾಜಿಗುಡದಲ್ಲಿರುವ ತಮ್ಮ ಮನೆಯಲ್ಲಿ ಅವರು ವಾಸಿಸುತ್ತಿದ್ದರು.
ಜನಾರ್ದನ್ ರಾವ್ ಅವರ ಪುತ್ರಿ ಸರೋಜಿನಿ ದೇವಿ ಅವರ ಪುತ್ರ ತೇಜ, ಅವರನ್ನು ಭೇಟಿಯಾಗಲು ಬಂದಿದ್ದು, ಈ ವೇಳೆ ಆಸ್ತಿ ಹಂಚಿಕೆ ಕುರಿತು ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜನಾರ್ದನ್ ರಾವ್ ಅವರು ಇತ್ತೀಚೆಗೆ ತಮ್ಮ ಹಿರಿಯ ಮೊಮ್ಮಗ ಶ್ರೀಕೃಷ್ಣನನ್ನು ವೇಲಜನ್ ಗ್ರೂಪ್ನ ನಿರ್ದೇಶಕರನ್ನಾಗಿ ನೇಮಿಸಿದ್ದರು ಮತ್ತು ತೇಜಗೆ 4 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ವರ್ಗಾಯಿಸಿದ್ದರು. ಆದರೆ, 29 ವರ್ಷದ ತೇಜ ಅಜ್ಜ ತನ್ನನ್ನು ಅನ್ಯಾಯವಾಗಿ ನಡೆಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾನೆ.
ತನಿಖಾಧಿಕಾರಿಗಳ ಪ್ರಕಾರ, ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇತ್ತೀಚೆಗೆ ಭಾರತಕ್ಕೆ ಮರಳಿದ್ದ ತೇಜ, ಕೋಪದ ಭರದಲ್ಲಿ ತಾನು ತಂದಿದ್ದ ಚಾಕುವಿನಿಂದ ತನ್ನ ಅಜ್ಜನನ್ನು 73 ಬಾರಿ ಇರಿದಿದ್ದಾನೆ. ಜನಾರ್ದನ್ ರಾವ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಸರೋಜಿನಿ ದೇವಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ತೇಜ ತನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಅವರಿಗೂ ಹಲವಾರು ಬಾರಿ ಚಾಕುವಿನಿಂದ ಇರಿಯಲಾಗಿದೆ.
ಘಟನೆಯನ್ನು ನೋಡಿದ ಮನೆಯ ಭದ್ರತಾ ಸಿಬ್ಬಂದಿಯನ್ನು ತೇಜ ಬೆದರಿಸಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತೇಜನನ್ನು ಶನಿವಾರ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತ ದಾಳಿಯ ಸಮಯದಲ್ಲಿ ಮಾದಕ ವಸ್ತುಗಳ ಪ್ರಭಾವದಲ್ಲಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಂಧ್ರಪ್ರದೇಶದ ಏಲೂರಿನ ಮೂಲದವರಾದ ರಾವ್, ತಮ್ಮ ಲೋಕೋಪಕಾರಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು. ಏಲೂರಿನ ಸರ್ಕಾರಿ ಜನರಲ್ ಆಸ್ಪತ್ರೆ ಮತ್ತು ತಿರುಮಲ ತಿರುಪತಿ ದೇವಸ್ಥಾನಕ್ಕೆ ಅವರು ದೊಡ್ಡ ಮೊತ್ತದ ದೇಣಿಗೆ ನೀಡಿದ್ದರು.