ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಕಬ್ಬಿಣದ ರಾಡ್ನಿಂದ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರು ರಾಮ್ ದಾಸ್ ಲಂಗರ್ ಬಳಿ ಈ ಘಟನೆ ನಡೆದಿದೆ. ಭಕ್ತರು ಮತ್ತು ಸ್ಥಳೀಯರು ಇದ್ದ ಜಾಗದಲ್ಲಿ ಈ ದಾಳಿ ನಡೆದಿದೆ. ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಯ ಇಬ್ಬರು ಸ್ವಯಂಸೇವಕರು ಗಾಯಗೊಂಡವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರನ್ನು ಅಮೃತಸರದ ಶ್ರೀ ಗುರು ರಾಮ್ ದಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ಗೆ ದಾಖಲಿಸಲಾಗಿದೆ.
ಆರೋಪಿ ಮತ್ತು ಆತನ ಸಹಚರನನ್ನು ದೇವಾಲಯದ ಆವರಣದಲ್ಲಿಯೇ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಯ ಮೊದಲು ಆರೋಪಿ ಸ್ಥಳವನ್ನು ಪರಿಶೀಲಿಸಿದ್ದ. “ಭಕ್ತರ ಮೇಲೆ ದಾಳಿ ಮಾಡಿದ ಆರೋಪಿಯೊಂದಿಗೆ ಎರಡನೇ ಆರೋಪಿ ಸಹ ನಡೆಸಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಖ್ಯ ಆರೋಪಿ ಹೊರಗೆ ಹೋಗಿ ಕಬ್ಬಿಣದ ರಾಡ್ನೊಂದಿಗೆ ವಾಪಸ್ಸಾಗಿ ಎಸ್ಜಿಪಿಸಿ ಸಿಬ್ಬಂದಿ ಮತ್ತು ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಭಕ್ತರ ಮೇಲೆ ದಾಳಿ ಮಾಡಿದ್ದಾನೆ.
ಪೊಲೀಸ್ ಅಧಿಕಾರಿ ಸರ್ಮೇಲ್ ಸಿಂಗ್ ಆರೋಪಿಯನ್ನು ಹರಿಯಾಣದ ನಿವಾಸಿ ಜುಲ್ಫಾನ್ ಎಂದು ಗುರುತಿಸಿದ್ದಾರೆ. ಈ ಘಟನೆಯಲ್ಲಿ ಆತ ಕೂಡಾ ಗಾಯಗೊಂಡಿದ್ದಾನೆ. ದಾಳಿಯ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜನರು ಭಯಪಡಬಾರದು ಎಂದು ಮನವಿ ಮಾಡಿದ್ದಾರೆ.
ಈ ಘಟನೆಯಿಂದ ಸಿಖ್ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಎಸ್ಜಿಪಿಸಿ ಆರೋಪಿ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಭಕ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಗೋಲ್ಡನ್ ಟೆಂಪಲ್ನ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಆತನನ್ನು ಬಂಧಿಸಲಾಗಿತ್ತು.