ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸ್ಪೀಕರ್ ಯು.ಟಿ.ಖಾದರ್, ಯಾವುದೋ ಕೋಪ, ದ್ವೇಷದಿಂದ ಅಮಾನತು ಮಾಡಿಲ್ಲ. ಅಗೌರವವಾಗಿ ನಡೆದುಕೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದಿದ್ದಾರೆ
ವಿಧಾನಸೌಧದಲ್ಲಿ ಮಾತನಾಡಿದ ಸ್ಪೀಕರ್ ಖಾದರ್, ಸದನಕ್ಕಿಂತ ದೊಡ್ಡದು, ಸದನದಲ್ಲಿ ಅಧ್ಯಕ್ಷರ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿದ್ದಾರೆ. ಅದಕ್ಕೆ ತಕ್ಕಂತೆ ಶಾಸಕರು ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ ಬಿಜೆಪಿ ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ? ಹಾಗಾಗಿ ಶಿಸ್ತುಕ್ರಮ ಜರುಗಿಸಿ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕರು ಎರಡನೇ ಬಾರಿ ಈರೀತಿ ವರ್ತಿಸಿದ್ದಾರೆ. ಜನಪ್ರತಿಇಧಿಗಳಾದವರು ಜವಾಬ್ದಾರಿಯಿಂದ ಸದನದಲ್ಲಿ ನಡೆದುಕೊಳ್ಳಬೇಕು. ಮತ್ತೆ ಕಲಾಪ ಆರಂಭವಾದಾಗಲೂ ಮತ್ತದೇ ತಪ್ಪು ಮಾಡಿದ್ದಾರೆ. ತಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಇರಬೇಕಿತ್ತು. ತಪ್ಪಿನ ಅರಿವು ಸ್ವಲ್ಪನಾದರೂ ಇರಬೇಕಲ್ಲವೇ? ಸದನದಲ್ಲಿಯೇ ಹೀಗೆ ನಡೆದುಕೊಳುವ ಶಾಸಕರು ನಳೆ ಜಿಲ್ಲಾ ಮಟ್ಟದ ಸಭೆಯಲ್ಲಿಯೂ ಹೀಗೆ ವರ್ತಿಸಿದರೆ ಹೇಗೆ? ಈ ನಿಟ್ಟಿನಲ್ಲಿ ಅಮಾನತು ಮಾಡಲಾಗಿದೆ ಎಂದರು.
ಕಾನೂನು ಹೋರಾಟ ಶಾಸಕರಿಗೆ ಬಿಟ್ಟ ವಿಚಾರ. ಆದರೆ ಶಾಸಕರಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಅರ್ಥವಾಗಬೇಕು. ಈಗ 6 ತಿಂಗಳು ಅಮಾನತ್ತಾಗಿದ್ದಾರೆ. ಹೀಗೇ ಮುಂದುವರಿದರೆ ಒಂದು ವರ್ಷ ಅಮಾನತಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.