
ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಉತ್ಸಾಹ ಕಳೆದುಕೊಂಡರೆ ಒಂದು ಹೆಜ್ಜೆಯನ್ನು ಇಡುವುದು ಕೂಡ ಭಾರವಾಗುತ್ತದೆ. ಅನೇಕರು ಉತ್ಸಾಹ ಕಳೆದುಕೊಂಡು ಮಾತನಾಡುವುದನ್ನು ನೀವು ಗಮನಿಸಿರಬಹುದು. ಮತ್ತೆ ಕೆಲವರು ದಣಿವೇ ಆಗದವರಂತೆ ಲವಲವಿಕೆಯಿಂದ ಇರುತ್ತಾರೆ.
ಧ್ಯಾನ ಮಾಡುವುದರಿಂದ ಮನಸ್ಸು ಚಂಚಲವಾಗುವುದಿಲ್ಲ. ಸಮಾಧಾನಚಿತ್ತದಿಂದ ಇರಬಹುದು. ಧ್ಯಾನ ನಿಮ್ಮ ಕೆಲಸಗಳ ಬಗ್ಗೆ ಗಮನ ಹರಿಸುವಂತೆ ಮಾಡುತ್ತದೆ.
ಇನ್ನು ಬಿಡುವು ಮಾಡಿಕೊಂಡು ಓದುವುದರಿಂದಲೂ ಅನುಕೂಲವಾಗುತ್ತದೆ. ಸಾಹಿತ್ಯ, ಪತ್ರಿಕೆ, ಮ್ಯಾಗ್ ಜಿನ್ ಗಳನ್ನು ಓದುವುದರಿಂದ ಕಲಿಕೆಯ ಆಸಕ್ತಿ ಬೆಳೆಸಿಕೊಂಡು ಕ್ರಿಯಾಶೀಲವಾಗಿರಲು ಸಹಕಾರಿಯಾಗುತ್ತದೆ. ಇದರೊಂದಿಗೆ ಲಘು ವ್ಯಾಯಾಮ ಮಾಡಿ. ವ್ಯಾಯಾಮದಿಂದ ದೇಹ ಸದೃಢವಾಗುತ್ತದೆ. ಮನಸ್ಸು ಉಲ್ಲಸಿತವಾಗುತ್ತದೆ.
ಹಾಡು ಕೇಳುವುದರಿಂದ ನಿಮ್ಮಲ್ಲಿ ನೆಮ್ಮದಿ ಮೂಡುತ್ತದೆ. ಮನಸಿಗೆ ಮುದ ನೀಡುವ ಸಂಗೀತ ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಇವುಗಳಿಂದ ಬದುಕು ಚೈತನ್ಯವಾಗುತ್ತದೆ ಎನ್ನುತ್ತಾರೆ ಬಲ್ಲವರು.