ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರದಲ್ಲಿ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿರುಗೇಟು ನೀಡಿದ್ದಾರೆ. ಇಂಥಹ ವಿಷಯದಲ್ಲೂ ರಾಜಕೀಯ ಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಸಿಟ್ಟಾಗಿದ್ದಾರೆ.
“ನಿಮ್ಮ ಟ್ವೀಟ್ಗೆ ದಿಗಿಲಾಯಿತು! ಅಲ್ಲಿ ಜೀವಗಳು ಅಪಾಯದಲ್ಲಿದೆ; ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಹೋರಾಟ ಪ್ರಾರಂಭವಾದಾಗಿನಿಂದ, ಖಾರ್ಟೂಮ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್ನಲ್ಲಿರುವ ಹೆಚ್ಚಿನ ಭಾರತೀಯ ಪ್ರಜೆಗಳು ಮತ್ತು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಸೂಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ಅರೆಸೇನಾಪಡೆಯ ನಡುವಿನ ಭೀಕರ ಘರ್ಷಣೆಯಲ್ಲಿ ಕರ್ನಾಟಕದ 31 ಮಂದಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, “ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಕರ್ನಾಟಕದ 31 ಜನರು ಸುಡಾನ್ನಲ್ಲಿ ಸಿಲುಕಿಕೊಂಡಿದ್ದಾರೆ . ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೆ ಸಿಲುಕಿಕೊಂಡಿರುವ ಅವರನ್ನು ಮರಳಿ ಕರೆತರಲು ಸರ್ಕಾರ ಶೀಘ್ರ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದ್ದರು.
ಇದಕ್ಕೆ ಸಿಟ್ಟಿಗೆದ್ದ ಸಚಿವ ಜೈಶಂಕರ್ ಕೇಂದ್ರ ಸರ್ಕಾರ ತನ್ನ ಕಾರ್ಯ ಮಾಡುತ್ತಿದೆ. ನೀವು ರಾಜಕೀಯ ಮಾಡಬೇಡಿ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಸುಡಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುಡಾನ್ನಲ್ಲಿ ತಂಗಿರುವ ಭಾರತೀಯರಿಗೆ ನಿನ್ನೆಯಷ್ಟೇ ಸಲಹೆ ನೀಡಿ, ಯಾರೂ ಮನೆಯಿಂದ ಹೊರಗೆ ಬರಬೇಡಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಬಹುದು. ಹಾಗಾಗಿ ದಿನಸಿ ದಾಸ್ತಾನು ಮಾಡಿಕೊಳ್ಳಿ ಎಂದು ಸಲಹೆ ನೀಡಿತ್ತು.