ಬೆಳಗಾವಿ: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಅನ್ಯ ಇಲಾಖೆಗಳಿಗೆ ನಿಯೋಜಿಸುವ ಸರ್ಕಾರದ ಕ್ರಮವನ್ನು ಅಧಿಕಾರಿ ಹಾಗೂ ನೌಕರರು ಪ್ರಭಾವ ಬಳಸಿ ಅನಗತ್ಯವಾಗಿ ಇತರೆ ಇಲಾಖೆಗಳಿಗೆ ನಿಯೋಜನೆಗೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ನಿಯೋಜನೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಸರ್ಕಾರಿ ನೌಕರರು ನಿಯೋಜನೆ ಮೇರೆಗೆ ಅನ್ಯ ಇಲಾಖೆ ತೆರಳವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ನಿಯಮಗಳಲ್ಲಿನ ಸಡಿಲತೆಯನ್ನು ಬಳಸಿಕೊಂಡು ಅಧಿಕಾರಿಗಳು ಅನಗತ್ಯವಾಗಿ ಹೆಚ್ಚು ದಿನಗಳ ಕಾಲ ಅನ್ಯ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಮುಂದುವರಿಯುತ್ತಾರೆ. ಇದರಿಂದ ನಿಯೋಜನೆಗೊಂಡ ಇಲಾಖೆ ಮುಂಬಡ್ತಿಯಲ್ಲೂ ತೊಂದರೆಯಾಗುತ್ತದೆ. ಹೀಗಾಗಿ ಕಠಿಣ ನಿಯೋಜನೆ ನಿಯಮಗಳಲ್ಲಿ ಜಾರಿಗೆ ತರುವುದು ಅಗತ್ಯವಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತಿದ್ದ ಪಶು ವೈಧ್ಯಾಧಿಕಾರಿಗಳನ್ನು ಮಾತೃ ಇಲಾಖೆ ಕಳುಹಿಸಲಾಗಿದೆ. ತಾಂತ್ರಿಕ ಹುದ್ದೆಗಳಲ್ಲಿ ನೇಮಕಗೊಂಡು ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳು ನಿಯೋಜನೆ ಮೇರೆಗೆ ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.