ಇಂದು ನಡೆದ ರಾಜ್ಯಸಭಾ ಚುನಾವಣಾ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದ್ದು, ನಿರೀಕ್ಷೆಯಂತೆ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್ ನ ಜಯರಾಂ ರಮೇಶ್ ಮೊದಲ ಸುತ್ತಿನಲ್ಲೇ ಆಯ್ಕೆಯಾಗಲಿದ್ದಾರೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆರು ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಾಗಲೇ ಅಡ್ಡ ಮತದಾನ ನಡೆಯಬಹುದೆಂಬ ಅನುಮಾನ ಮೂರು ಪಕ್ಷಗಳನ್ನೂ ಕಾಡಿದ್ದು, ಇದು ಚುನಾವಣಾ ಫಲಿತಾಂಶದ ಬಳಿಕ ನಿಜವಾಗಿದೆ.
ಇಂದು ಮತದಾನ ನಡೆಯುವಾಗಲೇ ಜೆಡಿಎಸ್ ನ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಬಳಿಕ ಮಾತನಾಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ಇನ್ನೂ ಕೆಲವರು ಅಡ್ಡ ಮತದಾನ ಮಾಡಿರಬಹುದೆಂಬ ಅನುಮಾನವಿದೆ ಎಂದಿದ್ದರು. ಈ ಚುನಾವಣಾ ಫಲಿತಾಂಶದಿಂದ ಅದೀಗ ನಿಜವಾದಂತಾಗಿದೆ.
ನಾಲ್ಕನೇ ಅಭ್ಯರ್ಥಿಯಾಗಿ ಬಿಜೆಪಿಯ ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತ ಫಲಿತಾಂಶದ ಬಳಿಕ ಇದು ತಿಳಿದುಬರಲಿದೆ.