ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪನವರೇ ಸರ್ವೋಚ್ಚ ನಾಯಕರಾಗಿದ್ದು ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಮೇಲೆ ವಿವಿಧ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತದೆ. ಸದ್ಯದಲ್ಲೇ ಪಟ್ಟಿ ಬಿಡುಗಡೆಯಾಗಲಿದೆ. ಆಕಾಂಕ್ಷಿಗಳು ಹಲವರಿದ್ದಾರೆ. ಪಕ್ಷ ಸೂಕ್ತ ಅಭ್ಯರ್ಥಿ ನೋಡಿ ಎಲ್ಲಾ ಜಾತಿ ಜನಾಂಗಕ್ಕೆ ಅವಕಾಶ ನೀಡಿ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಈಗಾಗಲೇ ಚುನಾವಣಾ ತಯಾರಿ ಮಾಡಿದ್ದಾನೆ. ಈ ಬಾರಿ ಸಮ್ಮಿಶ್ರ ಸರ್ಕಾರ ಬರಲಿದ್ದು ನಿರ್ಣಾಯಕರು ನಾವೇ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಪಕ್ಷದ ಬಗ್ಗೆ ಅವರು ಹೇಳಲೇಬೇಕು. ಆದರೆ ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯಲಿದೆ. ಸಮ್ಮಿಶ್ರ ಸರಕಾರದ ಪರಿಸ್ಥಿತಿಯನ್ನು ಕರ್ನಾಟಕದ ಜನ ನೋಡಿದ್ದಾರೆ. ಸುಭದ್ರ ಸರ್ಕಾರವನ್ನು ಜನ ತರುತ್ತಾರೆ 2023ರಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದ್ದು, ಹೆಚ್ಚಿನ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಎಂದರು.
ಸಾರ್ವತ್ರಿಕ ಚುನಾವಣೆ ಈಗಾಗಲೇ ಎದುರಾಗಿದೆ. ಬಿಜೆಪಿಯಲ್ಲಿ ಪ್ರತಿವರ್ಷ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಪ್ರಕ್ರಿಯೆ ನಂತರ ಟಿಕೆಟ್ ಘೋಷಣೆ ಆಗ್ತದೆ. ಈ ಬಾರಿಯೂ ಅದೇ ರೀತಿ ಆಗಲಿದೆ. ಸದ್ಯದಲ್ಲೇ ಪಟ್ಟಿ ಬಿಡುಗಡೆ ಆಗುತ್ತದೆ. ಇಂದು ಸಂಜೆಯೊಳಗೆ ಪಟ್ಟಿ ಬಿಡುಗಡೆ ಆಗಲಿದೆ ಎಂದರು.
224 ಕ್ಷೇತ್ರದಲ್ಲಿ ಕೆಲವು ಕ್ಷೇತ್ರಗಳಿಗೆ ಸೂಕ್ಷ್ಮತೆ, ಮುನ್ನೆಚ್ಚರಿಕೆ ವಹಿಸಬೇಕು. ಆಕಾಂಕ್ಷಿಗಳು ತುಂಬ ಜನ ಇರ್ತಾರೆ. ಸೂಕ್ತ ವ್ಯಕ್ತಿಗಳನ್ನು ಕಣಕ್ಕಿಳಿಸುವ ಕೆಲಸ ಆಗಬೇಕು. ಪ್ರಜಾಪ್ರಭುತ್ವದಲ್ಲಿ ರಾಜಕೀಯದಲ್ಲಿ ಅಪೇಕ್ಷೆ ಪಡುತ್ತಾರೆ. ಯಾರು ಸೂಕ್ತ ಎಂಬ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
2008 ರಲ್ಲಿ ಪೂರ್ಣ ಬಹುಮತ ಸಿಕ್ಕಿರಲಿಲ್ಲ. 2018 ರಲ್ಲಿ ಪೂರ್ಣ ಬಹುಮತ ಸಿಕ್ಕಿರಲಿಲ್ಲ. 2023 ಕ್ಕೆ ಪೂರ್ಣ ಬಹುಮತ ಬರಲಿದೆ. ನಮಗೆ ಎಲ್ಲರಿಗೂ, ನಮ್ಮ ನಾಡಿನ ಸರ್ವಶ್ರೇಷ್ಠ ನಾಯಕರು ಯಡಿಯೂರಪ್ಪ. ಅವರ ಬಗ್ಗೆ ಹೆಚ್ಚಿನ ಗೌರವ ಇರುತ್ತದೆ. ಅವರನ್ನು ಹೊರಗಿಟ್ಟು ಸಭೆ ಮಾಡುವ ವಿಚಾರವೇ ಇಲ್ಲ ಎಂದರು.