ಕಳೆದೆರಡು ದಿನದಿಂದ ಬಿಜೆಪಿ ಪರ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಂ ನಿಂದ ತೊಂದರೆ ಅನುಭವಿಸಿರುವ ಬೆಂಗಳೂರಿಗರು ಭಾನುವಾರ ಸಂಜೆ ವೇಳೆಗೆ ಮತ್ತಷ್ಟು ತೊಂದರೆ ಅನುಭವಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರ ರೋಡ್ ಶೋ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ಬೆಂಗಳೂರು ಪೊಲೀಸರು ಸಂಚಾರಿ ಸೂಚನೆ ನೀಡಿದ್ದಾರೆ.
ರಸೆಲ್ ಮಾರ್ಕೆಟ್ ಸ್ಕ್ವೇರ್, ಶಿವಾಜಿನಗರ ಮತ್ತು ಪೆರಿಯಾರ್ ಸರ್ಕಲ್ (ಟ್ಯಾನರಿ ರಸ್ತೆ) ರಸ್ತೆಯಲ್ಲಿ ರೋಡ್ ಶೋ ಇರಲಿದ್ದು ಸಂಜೆ 6 ರಿಂದ ರಾತ್ರಿ 10 ರವರೆಗೆ ಬದಲಿ ಮಾರ್ಗದಲ್ಲಿ ಸಾರ್ವಜನಿಕರು ಸಂಚರಿಸುವಂತೆ ಕೇಳಿಕೊಳ್ಳಲಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನದಾಸ್ ರಸ್ತೆ, ಮಹದೇವಪುರ ಮುಖ್ಯರಸ್ತೆ, ಮಾರತ್ತಹಳ್ಳಿ ಮುಖ್ಯರಸ್ತೆ ಮತ್ತು ವರ್ತೂರು ಕೋಡಿಯಲ್ಲಿ ಸಂಜೆ 5 ರಿಂದ 7 ಗಂಟೆಯವರೆಗೆ ಸಂಚಾರ ನಿರ್ಬಂಧವಿರುತ್ತದೆ.
ರಾತ್ರಿ 7 ರಿಂದ ರಾತ್ರಿ 9 ರವರೆಗೆ ಬೊಮ್ಮನಹಳ್ಳಿ ರಸ್ತೆ, ಬೇಗೂರು ರಸ್ತೆ, ಹೊಸೂರು ರಸ್ತೆ ಮತ್ತು ಹೊಂಗಸಂದ್ರ ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.