ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಫಲಿತಾಂಶ ಏನಾಗಲಿದೆಯೋ ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದ್ದರೆ, ರಾಜ್ಯದಲ್ಲಿ ಮುಂದಿನ ಸರ್ಕಾರ ಯಾರು ರಚಿಸಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಮತದಾನದ ಬಳಿಕ ಇದುವರೆಗೆ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂಗಳಲ್ಲಿ ಅಡಗಿದ್ದ ಮತ ಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರಗಳಿಗೆ ಸಾಗಿಸಲು ಸಿದ್ಧತೆ ನಡೆದಿದ್ದು, ಎಣಿಕಾ ಸಿಬ್ಬಂದಿಯೂ ಸಹ ಈಗಾಗಲೇ ತಮಗೆ ನಿಗದಿಪಡಿಸಿದ ಕೇಂದ್ರಗಳಲ್ಲಿ ಹಾಜರಾಗಿದ್ದಾರೆ.
ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತ ಎಣಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದು, ಅದಕ್ಕೂ ಮುನ್ನ ಕೆಲವರು ಟೆಂಪಲ್ ರನ್ ಮಾಡಿದ್ದಾರೆ. ಇಂದು ಮಧ್ಯಾಹ್ನದ ವೇಳೆಗಾಗಲೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.