ಮತದಾನ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡರೂ ಸಹ ಮತದಾನದೆಡಗಿನ ನಿರಾಸಕ್ತಿ, ಉದ್ದನೆಯ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲಬೇಕೆಂಬ ಉದಾಸೀನ ಮೊದಲಾದ ಕಾರಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವುದಿಲ್ಲ.
ಅಲ್ಲದೆ ಮತದಾನದ ದಿನದ ಆಸುಪಾಸಿನಲ್ಲಿ ರಜಾ ದಿನ ಬಂದರೆ ಅದನ್ನು ಹೊಂದಿಸಿಕೊಂಡು ಟೂರ್ ಹೋಗುವವರೇ ಜಾಸ್ತಿ. ಹೀಗಾಗಿ ಈ ಬಾರಿ ಮತದಾನವನ್ನು ವಾರದ ಮಧ್ಯೆ ಅಂದರೆ ಬುಧವಾರದಂದು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಕೆಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದ್ದು, ಇನ್ನು ಹಲವೆಡೆ ಮತದಾನ ಮಾಡಿ ಬಂದವರಿಗೆ ಮಾತ್ರ ಪ್ರವೇಶ ಎಂಬ ನಿರ್ಬಂಧ ವಿಧಿಸಲಾಗಿದೆ.
ಇದಲ್ಲದೆ ಮತಗಟ್ಟೆಗಳಲ್ಲಿ ಎಷ್ಟುದ್ದದ ಸಾಲು ಇದೆ ಹಾಗೂ ಮತದಾನ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಮೊಬೈಲ್ ಅಪ್ಲಿಕೇಶನ್ ಲಭ್ಯವಿದ್ದು, ಈವರೆಗೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ.
ಈ ಅಪ್ಲಿಕೇಶನ್ ಕಳೆದ ಚುನಾವಣೆಯಲ್ಲಿ ಜಾರಿಗೆ ತರಲಾಗಿತ್ತಾದರೂ ಈ ಕುರಿತು ಹೆಚ್ಚಿನ ಜನರಿಗೆ ಅರಿವಿರಲಿಲ್ಲ. ಇದೀಗ ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿದ್ದು, ಪ್ರತಿ ಹದಿನೈದು ನಿಮಿಷಗಳಿಗೆ ಅಪ್ಡೇಟ್ ಆಗುವ ಈ ಅಪ್ಲಿಕೇಶನ್ ನೆರವಿನಿಂದ ಮತದಾರರು ಕ್ಯೂ ಕುರಿತು ಮೊದಲೇ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಬಿಸಿಲು, ಮಳೆ ಮೊದಲಾದವನ್ನು ಲೆಕ್ಕಾಚಾರ ಹಾಕಿ ತಮ್ಮ ಹಕ್ಕು ಚಲಾಯಿಸಲು ತೆರಳಬಹುದಾಗಿದೆ.