ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಕುರಿತು ಪೊಲೀಸರ ತನಿಖೆ ವೇಳೆ ಒಂದೊಂದೇ ಶಾಕಿಂಗ್ ಸಂಗತಿಗಳು ಬಹಿರಂಗವಾಗುತ್ತಿದೆ. ಮೈಸೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾರೀಕ್ ಅಲ್ಲಿಯೇ ಬಾಂಬ್ ತಯಾರಿಸಿಕೊಂಡು ಮಂಗಳೂರಿಗೆ ಬಂದಿದ್ದ ಎನ್ನಲಾಗಿದೆ.
ಮೈಸೂರಿನ ಈತನ ಬಾಡಿಗೆ ಮನೆಯನ್ನು ಪೊಲೀಸರು ಪರಿಶೀಲಿಸಿದ ವೇಳೆ, ಕುಕ್ಕರ್, ಬ್ಯಾಟರಿ, ನಟ್ ಬೋಲ್ಟ್, ವೈರ್ ಮೊದಲಾದ ವಸ್ತುಗಳು ಸಿಕ್ಕಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಈತ ಮಂಗಳೂರಿಗೆ ತೆರಳುವ ಮುನ್ನ ಕುಕ್ಕರ್ ಬಾಂಬ್ ಕೈಯಲ್ಲಿಡಿದು ಫೋಟೋಗೆ ಪೋಸ್ ನೀಡಿದ್ದ ಎನ್ನಲಾಗಿದೆ.
ಶಾರೀಕ್ ಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆಗಳ ಸಂಪರ್ಕವಿರುವ ಶಂಕೆಯೂ ವ್ಯಕ್ತವಾಗುತ್ತಿದ್ದು, ಆತ ಮಂಗಳೂರಿನ ಯಾವ ಸ್ಥಳವನ್ನು ಗುರಿಯಾಗಿಸಿಕೊಂಡಿದ್ದ ಎಂಬ ಸಂಗತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಫೋಟದಲ್ಲಿ ಗಾಯಗೊಂಡಿರುವ ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ವಿಚಾರಣೆ ಬಳಿಕ ಮತ್ತಷ್ಟು ಸ್ಪೋಟಕ ಸಂಗತಿಗಳು ಬಹಿರಂಗವಾಗಲಿವೆ.