ಬೆಳಗಾವಿ: ಡಿ.ಕೆ. ಶಿವಕುಮಾರ್ ನನ್ನ ವೈಯಕ್ತಿಕವಾಗಿ ಹಾಳು ಮಾಡಿದ್ದಾನೆ. 40 ಕೋಟಿ ಖರ್ಚು ಮಾಡಿದ್ದಾರೆ. ಸಿಡಿ ಕೇಸ್ ಅನ್ನು ಸಿಬಿಐ ತನಿಖೆಗೆ ವಹಿಸಬೇಕು. ದೆಹಲಿಗೆ ಹೋಗಿ ಅಮಿಷ್ ಶಾ ಭೇಟಿಯಾಗಿ ಮನವಿ ಮಾಡುತ್ತೇನೆ.
ಸಾಕಷ್ಟು ಜನರನ್ನು ಬ್ಲ್ಯಾಕ್ ಮೇಲ್ ಮಾಡಲು ಸಿದ್ದ ಮಾಡಿಕೊಂಡಿದ್ದಾನೆ ಎಂದು ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಡಿಕೆಶಿಗೆ ಹೆದರಿಕೆ ಇದೆ. ಅವನು ನನಗೊಬ್ಬನಿಗೆ ಹೆದರೋದು. ಸಿಬಿಐ ಕೊಡಿಸ್ತಿನಿ ಬಿಡಲ್ಲ ಎಂದು ಶಪಥ ಮಾಡಿದರು.
ಮಂತ್ರಿ ಸ್ಥಾನ ವಿಚಾರವಾಗಿಮಾತನಾಡಿದ ಅವರು, ನಾನು ಮಂತ್ರಿ ಬೇಡ ಎಂದು ಹೇಳಿದ್ದೇನೆ. ಮೂರು ತಿಂಗಳು ಮಂತ್ರಿ ಆಗಿ ಅರ್ಥ ಇಲ್ಲ. ಚುನಾವಣೆ ನಂತರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಂತ್ರಿ ಆಗುತ್ತೇನೆ. ಬೊಮ್ಮಾಯಿ ವಿರುದ್ಧ ಯಾವುದೇ ದೂರು ನೀಡಿಲ್ಲ. ಸಾಮೂಹಿಕ ನಾಯಕತ್ವ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು.
ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಹೆಬ್ಬಾಳ್ಕರ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನನ್ನ ವಿರೋಧಿಗಳು ನನಗಿಂತ ಪ್ರಬಲ ಎಂದು ತಿಳಿದು ಚುನಾವಣೆ ಮಾಡುತ್ತೇನೆ. ಪಂಚಮಸಾಲಿ ಹೋರಾಟಕ್ಕೆ ಮೊದಲಿನಿಂದ ಬೆಂಬಲ ಇದೆ. ಅದರಲ್ಲಿ ಕೆಲವೊಂದು ನಾಯಿಗಳನ್ನು ಕೈ ಬಿಟ್ಟರೇ ಒಳ್ಳೆಯದು ಎನ್ನುವ ಮೂಲಕ ಪರೋಕ್ಷವಾಗಿ ಹೆಬ್ಬಾಳ್ಕರ್ ಗೆ ವ್ಯಂಗ್ಯವಾಡಿದ್ದಾರೆ ರಮೇಶ್ ಜಾರಕಿಹೊಳಿ.