
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕುಟುಂಬ ರಾಜಕಾರಣವನ್ನು ಟೀಕಿಸಿಕೊಂಡು ಬರುತ್ತಿರುವ ಬಿಜೆಪಿ ತಮ್ಮ ಪಕ್ಷ ಇಂತಹ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಿದೆ. ಬಿಜೆಪಿಯ ಕೇಂದ್ರದ ನಾಯಕರೂ ಸಹ ಕುಟುಂಬ ರಾಜಕಾರಣದ ವಿರುದ್ಧವಿದ್ದಾರೆ.
ಇದರ ಮಧ್ಯೆ ರಾಜ್ಯದ ಸಚಿವರೊಬ್ಬರು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, ಆಹಾರ ಸಚಿವ ಉಮೇಶ್ ಕತ್ತಿ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಈ ವಿಷಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಟುಂಬ ಇಲ್ಲದ ನಾಯಕರು. ಆದರೆ ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿದ್ದರು, ಈಗ ನಾನೂ ಇದ್ದೇನೆ. ಹಾಗೆ ಯಡಿಯೂರಪ್ಪನವರು ರಾಜಕಾರಣದಲ್ಲಿದ್ದರು. ಈಗ ಅವರ ಪುತ್ರ ವಿಜಯೇಂದ್ರ ಕೂಡ ರಾಜಕೀಯದಲ್ಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.