
ಹಿಂದೂ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಯಲ್ಲಿ ಕುಂಕುಮವನ್ನು ಬಳಸಲಾಗುತ್ತದೆ. ಎಲ್ಲ ಶುಭ ಸಂದರ್ಭಗಳಲ್ಲೂ ಕುಂಕುಮ ಬಳಕೆ ಮಾಡುವುದು ಪದ್ಧತಿ. ಕುಂಕುಮವನ್ನು ಶುಭ ಸಂಕೇತ ಎಂದು ಭಾವಿಸಲಾಗುತ್ತದೆ. ಸಿಂಧೂರ ಸುಮಂಗಲಿಗೆ ಭೂಷಣ ಎನ್ನಲಾಗುತ್ತದೆ. ಸೌಭಾಗ್ಯದ ಸಂಕೇತ ಕುಂಕುಮ. ಪತಿಯ ದೀರ್ಘ ಆಯಸ್ಸನ್ನು ಬಯಸಿ ಮಹಿಳೆಯರು ಕುಂಕುಮವನ್ನು ಹಚ್ಚಿಕೊಳ್ತಾರೆ. ಅನೇಕ ಬಾರಿ ಸಿಂಧೂರ ಹಚ್ಚಿಕೊಳ್ಳುವಾಗ ಮಹಿಳೆಯರು ತಪ್ಪು ಮಾಡ್ತಾರೆ. ಇದು ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ.
ಸಿಂಧೂರ ಹಚ್ಚಿಕೊಳ್ಳುವಾಗ ಕೆಲ ತಪ್ಪುಗಳನ್ನು ಮಹಿಳೆಯರು ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಕುಂಕುಮವನ್ನು ಯಾರಿಂದಲೂ ಸಾಲ ಪಡೆದು ಹಚ್ಚಿಕೊಳ್ಳಬಾರದು. ಬೇರೆ ಮಹಿಳೆಯರಿಂದ ಕುಂಕುಮವನ್ನು ಸಾಲವಾಗಿ ಪಡೆಯಬಾರದು. ಹಾಗೆಯೇ ತಮ್ಮ ಕುಂಕುಮವನ್ನು ಅವರ ಜೊತೆ ಹಂಚಿಕೊಳ್ಳಬಾರದು. ಇದು ಪತಿಯ ಅದೃಷ್ಟವನ್ನು ದುರಾದೃಷ್ಟವಾಗಿ ಬದಲಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಹಾಗೆಯೇ ಮಹಿಳೆಯರು ಎಂದೂ ತಲೆ ಸ್ನಾನ ಮಾಡಿದ ತಕ್ಷಣ ಕುಂಕುಮ ಹಚ್ಚಿಕೊಳ್ಳಬಾರದು. ಕೂದಲು ಸಂಪೂರ್ಣ ಒಣಗಿದ ಮೇಲೆ ಸಿಂಧೂರವನ್ನು ಹಚ್ಚಿಕೊಳ್ಳಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಲ್ಲವಾದ್ರೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಪತಿ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
ಯಾವುದೇ ಮಹಿಳೆ ಕುಂಕುಮ ಹಚ್ಚಿಕೊಂಡ ನಂತ್ರ ಆ ಕುಂಕುಮವನ್ನು ಕೂದಲಿನಿಂದ ಮುಚ್ಚಬಾರದು. ಇದು ದಾಂಪತ್ಯ ಜೀವನದಲ್ಲಿ ಸಮಸ್ಯೆಯುಂಟು ಮಾಡುತ್ತದೆ. ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುತ್ತದೆ. ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ.