ಹೆಚ್.ಡಿ. ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದಾರೆ.
ಚಾಮುಂಡೇಶ್ವರಿ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ 37 ಸೀಟ್ ಗೆದ್ದಿದ್ದ ಜೆಡಿಎಸ್ ಈ ಬಾರಿ 20-22 ಸೀಟ್ ಗೆಲ್ಲಬಹುದಷ್ಟೇ. ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಶಾಸಕರಿಗಷ್ಟೇ ಅಲ್ಲದೇ ಮಂತ್ರಿಗಳು ಸಹ ಭೇಟಿ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯ್ತು.
ಹಳೆ ಮೈಸೂರು ಭಾಗದಲ್ಲಿ ಹೊರತುಪಡಿಸಿ ಇತರೆಡೆ ಜೆಡಿಎಸ್ ಗೆ ನೆಲೆ ಇಲ್ಲ. ಬೇರೆಯವರು ಹೆಚ್ಚು ಸಂಖ್ಯೆಯಲ್ಲಿ ಗೆದ್ದಾಗ ಮಾತ್ರ ಅವರು ಬೇಳೆ ಬೇಯಿಸಿಕೊಳ್ಳುತ್ತಾರೆ. ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಬರುತ್ತಾರೆ. ಅವರು ಸ್ವಂತ ಬಲದ ಮೇಲೆ ಎಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು. ಚಾಮುಂಡೇಶ್ವರಿ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿ, ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರನ್ನು ಘೋಷಿಸಿರುವ ವಿಷಯದಲ್ಲಿ ವ್ಯಂಗ್ಯವಾಡಿದ್ರು. ಬೆಂಗಳೂರಿನಿಂದ ಅವನ್ಯಾವನ್ನೋ ಕರೆದು ತಂದಿದ್ದಾರೆ. ಅವನು ನಿಲ್ಲಲ್ಲ ಅಂದರೂ ವರುಣಾಗೆ ಕರೆತಂದು ನಿಲ್ಲಿಸಿದ್ದಾರೆ. ಯಾರೇ ನಿಂತರೂ ವರುಣಾ ಕ್ಷೇತ್ರದ ಜನರ ತೀರ್ಪು ಅಂತಿಮ. ಇದು ನನ್ನ ಕೊನೆಯ ಚುನಾವಣೆ. ಪಕ್ಷದಲ್ಲಿ ಗುಂಪುಗಾರಿಕೆ ಇದೆ, ಆದರೆ ಅದೆಲ್ಲವನ್ನೂ ಮರೆತು ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.