ರಾಜಸ್ತಾನದ ಉದಯ್ಪುರದಲ್ಲಿ ನಡೆದಿರುವ ಶಿರಚ್ಛೇದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಧರ್ಮನಿಂದನೆಗೆ ಶಿರಚ್ಛೇದನವೇ ಶಿಕ್ಷೆ ಎಂದು ಮಕ್ಕಳಿಗೆ ಮದರಸಾಗಳಲ್ಲಿ ಕಲಿಸಲಾಗುತ್ತಿದೆ. ಇದನ್ನು ದೇವರ ನಿಯಮ ಎಂದು ಬೋಧಿಸಲಾಗುತ್ತಿದ್ದು, ಮದರಸಾಗಳಲ್ಲಿ ಮಾಡ್ತಿರೋ ಪಾಠಗಳ ಬಗ್ಗೆ ಪರಿಶೀಲಿಸುವ ಅಗತ್ಯವಿದೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ನಾವು ರೋಗ ಲಕ್ಷಣಗಳು ಬಂದಾಗ ಚಿಂತೆಗೊಳಗಾಗುತ್ತೇವೆ, ಆದ್ರೆ ದೊಡ್ಡ ಕಾಯಿಲೆಯೇ ಬಂದಾಗ ಅದನ್ನು ಗಮನಿಸುವುದೇ ಇಲ್ಲ ಎಂದವರು ಮಾರ್ಮಿಕವಾಗಿ ನುಡಿದರು. ಉದಯಪುರದಲ್ಲಿ ಹಾಡಹಗಲೇ ಹಿಂದು ವ್ಯಕ್ತಿಯ ಬರ್ಬರ ಹತ್ಯೆ ನಡೆದಿತ್ತು. ಕನ್ಹಯ್ಯಾ ಲಾಲ್ ಎಂಬ ಟೇಲರ್ನನ್ನು ಇಬ್ಬರು ಕತ್ತು ಕತ್ತರಿಸಿ ಭೀಕರವಾಗಿ ಕೊಂದಿದ್ದರು. ಆ ವಿಡಿಯೋ ಜೊತೆಗೆ ತಮ್ಮ ನೀಚ ಕೃತ್ಯವನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ವಿಡಿಯೋವನ್ನೂ ವೈರಲ್ ಮಾಡಿದ್ದರು.
ಪ್ರಧಾನಿ ಮೋದಿ ಅವರನ್ನೂ ಇದೇ ರೀತಿ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಾ ಲಾಲ್ನ 8 ವರ್ಷದ ಮಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಇಬ್ಬರು ಮುಸ್ಲಿಂ ಯುವಕರು ಈ ಕೃತ್ಯ ಎಸಗಿದ್ದಾರೆ. ತಾವೇ ಕನ್ಹಯ್ಯ ಲಾಲ್ನನ್ನು ಕೊಂದಿರುವುದಾಗಿ ಸಾಮಾಜಿಕ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಪೋಸ್ಟ್ನಲ್ಲಿ ಹೇಳಿಕೊಂಡಿದ್ದರು. ಈಗಾಗ್ಲೇ ರಾಜ್ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದಾಗ ಇವರು ಸಿಕ್ಕಿಬಿದ್ದಿದ್ದಾರೆ.