
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರಿಂದಾಗಿ ತರಕಾರಿ ದರ ಗಗನಕ್ಕೇರಿದೆ.
ಟೊಮೇಟೊ, ಬೀನ್ಸ್, ನುಗ್ಗೆಕಾಯಿ ದರ ಶತಕ ಬಾರಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದೆ. ಅಲ್ಲದೆ, ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿದ್ದ ತರಕಾರಿ ಪ್ರಮಾಣ ಕೂಡ ಕಡಿಮೆಯಾಗಿದೆ.
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯ ಕಾರಣ ಟೊಮೆಟೊ, ಸೊಪ್ಪು, ತರಕಾರಿ ಹಣ್ಣುಗಳು ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದ್ದು, ಇದರ ಪರಿಣಾಮ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಸೊಪ್ಪು, ತರಕಾರಿ ದರ ಏರಿಕೆಯಾಗಿದೆ. ಹಾಪ್ ಕಾಮ್ಸ್ ನಲ್ಲಿ ಕ್ಯಾರೆಟ್ 67 ರೂ., ನಿಂಬೆಹಣ್ಣು 200 ರೂ., ಟೊಮೆಟೊ 75 ರೂ., ಬೀನ್ಸ್ 107, ನುಗ್ಗೆಕಾಯಿ 104 ರೂ. ದರ ಇದೆ. ಮಾರುಕಟ್ಟೆಗಳು, ಚಿಲ್ಲರೆ ದರದಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆ ಇದೆ. ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.