
ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಕಳೆದ ಎರಡು ದಿನಗಳಿಂದ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಎರಡನೇ ಶನಿವಾರ, ಭಾನುವಾರ ರಜೆ ಇದ್ದು, ಸೋಮವಾರ ಮುಷ್ಕರದ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಂಗಳವಾರವೂ ಕೂಡ ಮುಷ್ಕರ ಮುಂದುವರೆಯಲಿದೆ. ಇದರಿಂದಾಗಿ ಬ್ಯಾಂಕುಗಳಲ್ಲಿ ಸೇವೆ ಇರುವುದಿಲ್ಲ.
ಇದರಿಂದಾಗಿ ನಗದು ಠೇವಣಿ, ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್, ಸಾಲ ಪಡೆಯುವುದು, ಮರುಪಾವತಿ ಮೊದಲಾದವುಗಳ ಮೇಲೆ ಪರಿಣಾಮ ಬೀರಿದೆ. ಕಳೆದ ನಾಲ್ಕು ದಿನಗಳಿಂದ ಬ್ಯಾಂಕ್ ಇಲ್ಲದ ಕಾರಣ ಎಟಿಎಂಗಳಲ್ಲಿಯೂ ಹಣದ ಕೊರತೆ ಕಂಡುಬಂದಿದೆ. ಇದರಿಂದಾಗಿ ಬ್ಯಾಂಕ್ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾವ ವಿರೋಧಿಸಿ ಮುಷ್ಕರ ನಡೆಸಲಾಗಿದೆ. ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯವಾಗದಂತೆ ಮುಷ್ಕರ ನಡೆಸುವುದಾಗಿ ಹೇಳಲಾಗಿದ್ದರೂ ಕೂಡ ಬಹುತೇಕ ಸೇವೆಗಳಿಗೆ ತೊಂದರೆಯಾಗಿದೆ. ಶೇಕಡ 90 ರಷ್ಟು ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಲಾಗಿದೆ.