
ಬಳ್ಳಾರಿ: ಆರ್ಥಿಕ ಇಲಾಖೆ ನಿರ್ದೇಶನದ ಮೇರೆಗೆ ಹಾಗೂ ಎಸ್ಎಲ್ಬಿಸಿ ಮಾರ್ಗದರ್ಶನದೊಂದಿಗೆ ಜೂ.6 ರಿಂದ ಜೂ.12 ರವರೆಗೆ ಆರ್ಥಿಕ ಸೇವಾ ಇಲಾಖೆ ಸಾಂಪ್ರದಾಯಿಕ ಸಪ್ತಾಹ ಆಚರಣೆ ಪ್ರಯುಕ್ತ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬಳ್ಳಾರಿಯ ಲೀಡ್ ಬ್ಯಾಂಕ್, ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು, ವಾಣಿಜ್ಯ ಬ್ಯಾಂಕ್ಗಳು, ಗ್ರಾಮೀಣ ಬ್ಯಾಂಕ್ಗಳು, ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಎಲ್ಲಾ ಬ್ಯಾಂಕ್ಗಳ ಸಹಯೋಗದೊಂದಿಗೆ ಜೂ.8 ರಂದು ಬೆಳಗ್ಗೆ 10.30ಕ್ಕೆ ನಗರದ ಹೊಟೇಲ್ ರಾಯಲ್ ಪೋರ್ಟ್ನಲ್ಲಿ ಬೃಹತ್ ಸಾಲ ಸಂಪರ್ಕ ಮೇಳವನ್ನು ಆಯೋಜಿಸಲಾಗಿದೆ.
ಈ ಮೇಳದಲ್ಲಿ ಕೃಷಿ ಸಾಲ, ಗೃಹಸಾಲ, ವಾಹನ ಸಾಲ, ಎಂಎಸ್ಎಂಇ ಹಾಗೂ ಇತರ ಸಾಲಗಳನ್ನು ನೀಡುವುದರೊಂದಿಗೆ ವಿವಿಧ ಸಾಲಗಳ ಸಮಗ್ರ ಮಾಹಿತಿ ನೀಡಲಾಗುತ್ತದೆ ಹಾಗೂ ಪಿಎಂ ಜನ ಸುರಕ್ಷ ಯೋಜನೆಗಳನ್ನು ಹೆಚ್ಚು ಪ್ರಚಲಿತಗೊಳಿಸಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳಾದ ಪಿಎಂಜೆಡಿವೈಯಲ್ಲಿ ಖಾತೆ ತೆರೆಯಲು ಪೂರಕವಾಗಲಿದೆ ಹಾಗೂ ಪಿಎಂಎಸ್ಬಿವೈ, ಪಿಎಂಜೆಜೆವೈ ಮತ್ತು ಎಪಿವೈ ದಾಖಲಾತಿ ಮಾಡಲು ಪೂರಕವಾಗಲಿದೆ.
ಸರ್ಕಾರದ ಯೋಜನೆಗಳಾದ ಕೃಷಿ ಮೂಲಸೌಕರ್ಯ ನಿಧಿ ಪಿಎಂಇಜಿಪಿ, ಪಿಎಂಎವೈ, ಪಿಎಂ ಸ್ವನಿಧಿ, ಪಿಎಂಎಫ್ಎಂಇ, ಸ್ಟ್ಯಾಂಡ್ ಅಫ್ ಇಂಡಿಯಾ, ಇಸಿಎಲ್ಜಿಎಸ್ ಹಾಗೂ ಮುಂತಾದ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ಸಾಲವನ್ನು ಮಂಜೂರು ಮಾಡಲು ನಿರ್ದೇಶಿಸಲಾಗಿದೆ.
ಈ ಸಾಲ ಮೇಳದಲ್ಲಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡಲು ಸದಸ್ಯ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ ಅವರು ತಿಳಿಸಿದ್ದಾರೆ.