
ಧಾರವಾಡ: ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2018-19ನೇ ಸಾಲಿನಿಂದ ರಾಜ್ಯದಲ್ಲಿ ಘೋಷಣೆ ಮಾಡಿರುತ್ತದೆ. ಜಿಲ್ಲೆಯಾದ್ಯಂತ ಅರ್ಹ ರೈತರು ಯೋಜನೆಯಡಿ ನೊಂದಾಯಿಸಿಕೊಂಡಿರುತ್ತಾರೆ.
ನೊಂದಾಯಿಸಿದ ರೈತರಲ್ಲಿ 7267 ರೈತರು ನೊಂದಣಿ ನಂತರ ಆಧಾರ್ ತಿದ್ದುಪಡಿ ಮಾಡಿಸಿಕೊಂಡ ಪ್ರಯುಕ್ತ ಅಂತಹ ರೈತರ ಹಣ ಜಮೆಯಾಗದೆ ಕೇಂದ್ರ ಸರ್ಕಾರದ ಪೊರ್ಟಲ್ನಲ್ಲಿ (https://pmkisan.gov.in/beneficiarystatus.aspx) ಸ್ಥಿತಿ ಪರಿಶೀಲಿಸಿದಾಗ ಆಧಾರ್ ಸಂಖ್ಯೆ ಪರಿಶೀಲನೆ ಆಗಿರುವುದಿಲ್ಲವೆಂದು (Adhaar Not Verified) ವರದಿ ತೊರಿಸುತ್ತದೆ.
ಇಂತಹ ರೈತರು ಕೇಂದ್ರ ಸರ್ಕಾರದ ಸೂಚಿತ ವೆಬ್ಸೈಟ್ https://pmkisan.gov.in/UpdateAadharNoByFarmer.aspx ನಲ್ಲಿ ಸ್ವತಃ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪ್ರಸಕ್ತವಾಗಿ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಡೆಟ್ ಮಾಡಿದರೆ ಸಮಸ್ಯೆ ಪರಿಹಾರವಾಗಿ ನಂತರದ ದಿನಗಳಲ್ಲಿ ಹಣ ಜಮಾವಣೆ ಆಗುವುದು.
ನೊಂದಾಯಿತ ಕೆಲ ರೈತರ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗದ ಕಾರಣ ಸ್ಥಿತಿ ಪರಿಶೀಲಿಸಿದಾಗ ಆಧಾರ ನಾಟ್ ಸಿಡೆಡ್ ವಿತ್ ಎನ್,ಪಿ.ಸಿ.ಐ (Adhaar Not seeded with NPCI) ಎಂದು ತೋರಿಸಿದರೆ ಅಂತಹ ರೈತರು ತಾವು ಖಾತೆ ಹೊಂದಿರುವ ಒಂದು ಬ್ಯಾಂಕಿನಲ್ಲಿ ಆಧಾರ್ ಸಂಖ್ಯೆಯನ್ನು ಸಿಡಿಂಗ್ ಮಾಡಿಸಬೇಕು. ದಿನಾಂಕ:13-06-2019ರ ವರೆಗೆ 58284 ಸಣ್ಣ ಮತ್ತು ಅತಿ ಸಣ್ಣ ರೈತರು ನೋಂದಾಯಿಸಿಕೊಂಡಿರುತ್ತಾರೆ. ದಿನಾಂಕ:31-05-2019ರ ವರೆಗೆ 14010 ರೈತರು ಮೊದಲನೆ ಹಂತದಲ್ಲಿ 14000 ರೈತರು ಎರಡನೇ ಹಂತದಲ್ಲಿ (ಒಟ್ಟು 28010 ರೈತರು) ಫಲಾನುಭವಿಗಳಾಗಿರುತ್ತಾರೆ.
ನೊಂದಾಯಿತ ಕೆಲ ರೈತರ ಸ್ಥಿತಿ ಪರಿಶೀಲನೆಯನ್ನು ರಾಜ್ಯ ಸರ್ಕಾರದ ಪೋರ್ಟಲ್ನಲ್ಲಿ (http://fruitspmk.karnataka.gov.in/MISReport/CheckStatus.aspx) ಮಾಡಿದಾಗ ಭೂಮಿಯ ಜೊತೆ ಹೋಲಿಸಿದಾಗ ದೊರೆತ ಸಂಶಾಯತ್ಮಕ ಪ್ರಕರಣ ಎಂದು ತೋರಿಸಿದರೆ ರೈತರು ಹೊಸದಾಗಿ ಆರ್.ಟಿ.ಸಿ ಯಲ್ಲಿರುವ ಸರ್ವೆನಂಬರ್ ಹಾಗೂ ಹಿಸ್ಸಾನಂಬರ್ ವಿವರಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿ ಮೇಲೆ ತಿಳಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ಸಮಸ್ಯೆಗಳನ್ನು ಶೀಘ್ರವಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಹರಿಸಿಕೊಳ್ಳಲು ಕೋರಲಾಗಿದೆ.