ಬೆಂಗಳೂರು : ಬೆಂಗಳೂರಿನ ‘ ರಾಮೇಶ್ವರಂ ಕೆಫೆ’ ಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ‘ಮಾಝ್ ಮುನೀರ್’ ನನ್ನು 7 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಕೇಸ್, ಮಂಗಳೂರಿನ ಗೋಡೆ ಬರಹ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಝ್ ಮುನೀರ್ ಗೂ ಬೆಂಗಳೂರಿನ ‘ ರಾಮೇಶ್ವರಂ ಕೆಫೆ’ ಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ನಂಟು ಇದೆ ಎಂದು ಎನ್ ಐ ಎ ಅಧಿಕಾರಿಗಳು ಶಂಕಿಸಿ ಆತನನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು.
ಅಂತೆಯೇ ಕೋರ್ಟ್ ಪರಪ್ಪನ ಅಗ್ರಹಾರದಲ್ಲಿದ್ದ ‘ ಮಾಝ್ ಮುನೀರ್’ ನನ್ನು 7 ದಿನ NIA ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಓರ್ವನನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಬಳ್ಳಾರಿ ಮೂಲದ ಶಬ್ಬೀರ್ ನನ್ನು ವಶಕ್ಕೆ ಪಡೆದ ಎನ್ ಐ ಎ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದರು.