ಬೆಂಗಳೂರು : ಬೆಂಗಳೂರಿನಲ್ಲಿ ಸದ್ಯದ ಪರಿಸ್ಥಿತಿ ನೀರಿಲ್ಲ…ನೀರಿಲ್ಲ…ನೀರಿಲ್ಲ.! ಹೌದು. ಬೆಂಗಳೂರಿನಲ್ಲಿ ನೀರಿಗೆ ಆಹಾಕಾರ ಉಂಟಾಗಿದ್ದು, ಪರಿಸ್ಥಿತಿ ಅಯೋಮಯವಾಗಿದೆ. ನೀರು ಸಿಗದ ಹಿನ್ನೆಲೆ ಕೆಲವರು ನದಿಗಳಿಗೆ ಅಕ್ರಮವಾಗಿ ಪಂಪ್ ಸೆಟ್ಟು ನೀರಿಗೆ ಕನ್ನ ಹಾಕುತ್ತಿದ್ದಾರೆ.
ಇದೀಗ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದ ಈಜುಕೊಳಗಳಿಗೆ ಕಾವೇರಿ ನೀರನ್ನು ಬಳಸಬಾರದು ಎಂದು ಆದೇಶ ಹೊರಡಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ಹಾಕಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ‘ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈಜು ಕೊಳ ಉದ್ದೇಶಗಳಿಗೆ ಬಳಸುವುದನ್ನು’ ನೀಷೇದಿಸಲಾಗಿದೆ.
ಜಲಮಂಡಳಿ ಕಾಯ್ದೆ 1964ರ ಕಲಂ 109ರಂತೆ ಈಜು ಕೊಳ ಉದ್ದೇಶಗಳಿಗೆ ಕಾವೇರಿ ನೀರು ಬಳಸಿದಲ್ಲಿ 5000 ರೂ. ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ 5000 ರೂ. ಜತೆಗೆ ಹೆಚ್ಚುವರಿಯಾಗಿ ಪ್ರತಿ ದಿನ 500 ರೂ. ದಂಡ ವಿಧಿಸಲಾಗುವುದು. ಹಾಗೂ ಈಜುಕೊಳದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.