ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ರೈತನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಿಬ್ಬಂದಿಗಳ ವರ್ತನೆಗೆ ಪ್ರಯಾಣಿಕರು ಕಿಡಿಕಾರಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಟ್ಟೆ ಕ್ಲೀನ್ ಇಲ್ಲ ಎಂದು ಸಿಬ್ಬಂದಿ ರೈತನನ್ನು ಮೆಟ್ರೋದ ಒಳಗಡೆ ಬಿಡಲಿಲ್ಲ. ರೈತರೊಬ್ಬರು ಮೆಟ್ರೋ ನಿಲ್ದಾಣಕ್ಕೆ ತಮ್ಮ ಲಗೇಜು ಸಮೇತ ಬಂದಿದ್ದು, ರೈತ ಹಳೆ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ರೈತನನ್ನು ಗಂಟೆಗಟ್ಟಲೇ ನಿಲ್ಲಿಸಿ ಒಳಗೆ ಬಿಡದೇ ಸತಾಯಿಸಿದ ಅಮಾನವೀಯ ಘಟನೆ ವರದಿಯಾಗಿದೆ.
ಬಡ ರೈತನ ಮೇಲೆ ಮೆಟ್ರೋ ಸಿಬ್ಬಂದಿ ದರ್ಪ ಮೆರೆದಿದ್ದು, ಮಾನವೀಯ ಮರೆತ ನಮ್ಮ ಮೆಟ್ರೋ ಸಿಬ್ಬಂದಿ ವರ್ತನೆಗೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಮೆಟ್ರೋದಲ್ಲಿ ಎಲ್ಲರಿಗೂ ಮುಕ್ತವಾಗಿ ಪ್ರಯಾಣ ಮಾಡುವ ಸ್ವಾತಂತ್ರ್ಯವಿದೆ. ಆದರೆ ಬಟ್ಟೆ ಕೊಳೆಯಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ರೈತನನ್ನು ಬಿಡದೇ ಅವಮಾನ ಮಾಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.