ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗಾಗಿಯೂ ಕಸರತ್ತು ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷ, ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದೆ.
ಇದರ ಮಧ್ಯೆ ಕಾಂಗ್ರೆಸ್ಸಿನ ಮೂವರು ಮಾಜಿ ಸಂಸದರು ರಾಜ್ಯ ರಾಜಕಾರಣ ಪ್ರವೇಶಿಸಲು ಒಲವು ತೋರಿದ್ದು, ವಿಧಾನಸಭಾ ಚುನಾವಣೆಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಂಸದರುಗಳಾದ ಕೋಲಾರದ ಕೆ.ಎಚ್. ಮುನಿಯಪ್ಪ, ಚಿತ್ರದುರ್ಗದ ಬಿ.ಎನ್. ಚಂದ್ರಪ್ಪ ಮತ್ತು ಚಾಮರಾಜನಗರ ಕ್ಷೇತ್ರದ ಆರ್. ಧ್ರುವನಾರಾಯಣ ಅರ್ಜಿ ಸಲ್ಲಿಸಿದವರಾಗಿದ್ದಾರೆ.
ಧ್ರುವನಾರಾಯಣ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಅರ್ಜಿ ಸಲ್ಲಿಸಿದ್ದು, ಈ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಕೆ.ಎಚ್. ಮುನಿಯಪ್ಪ ಮತ್ತು ಬಿ.ಎಂ. ಚಂದ್ರಪ್ಪ ತಮ್ಮ ಅರ್ಜಿಯಲ್ಲಿ ಯಾವುದೇ ಕ್ಷೇತ್ರವನ್ನು ಪ್ರಸ್ತಾಪಿಸದೆ ಆಯ್ಕೆಯನ್ನು ಹೈಕಮಾಂಡ್ ಗೆ ಬಿಟ್ಟಿದ್ದೇವೆ ಎಂದು ನಮೂದಿಸಿದ್ದಾರೆ.