ಶಿವಮೊಗ್ಗ: ಭದ್ರಾವತಿ ಶಾಕ ಬಿ.ಕೆ. ಸಂಗಮೇಶ್ ಅವರ ಬೆಲೆ ಕೇವಲ 50 ಕೋಟಿಯೇ? ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸಂಗಮೇಶ್ ಅವರನ್ನು ಬಿಜೆಪಿಗೆ ಕರೆತರಲು 50 ಕೋಟಿ ನೀಡುವ ಆಮಿಷ ಒಡ್ಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿಕೆಶಿ ಹೇಳಿಕೆಗೆ ವ್ಯಂಗ್ಯವಾಡಿದ ಈಶ್ವರಪ್ಪ, ಸಂಗಮೇಶ್ ಬೆಲೆ ಕೇವಲ 50 ಕೋಟಿಯೇ ಕನಿಷ್ಠ 500 ಕೋಟಿಯಾದರೂ ಬೇಡವೇ. ಡಿಕೆಶಿಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಮಾಡಿದ್ದು 500 ಕೋಟಿ ಆಫರ್ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ಕೋಮುಗಲಬೆಗೆ ಈಶ್ವರಪ್ಪ ಕಾರಣ ಎಂದು ಹೇಳಿದ್ದಾರೆ. ಅವರ ಹೇಳಿಕೆ ಆಶ್ಚರ್ಯ ತಂದಿದೆ. ಅವರಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದರು. ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಒಲವು ತೋರಿಸುವುದರಲ್ಲಿ ಅರ್ಥವೇ ಇಲ್ಲ. ಬಿ.ಆರ್. ಅಂಬೇಡ್ಕರ್, ಜಗಜೀವನ ರಾಮ್ ಅವರನ್ನು ಸೋಲಿಸಿದ ಕಾಂಗ್ರೆಸ್ ಗೆ ಒಬಿಸಿ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರಿಗೆ ಹಿಂದುಳಿದವರ ಬಗ್ಗೆ ಪ್ರೀತಿ ಇದ್ದರೆ ಈಶ್ವರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಏಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಮೇಲಿನ ಪ್ರೀತಿಗೆ ಧನ್ಯವಾದ. ಆದರೆ ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎನ್ನುವ ಅವರ ವ್ಯಂಗ್ಯ ಸರಿಯಲ್ಲ. ಪ್ರಧಾನಿ ಮೋದಿಯವರು ಕೂಡ ಹಿಂದುಳಿದವ ವರ್ಗದವರು ಎಂಬ ಪ್ರಜ್ಞೆ ಅವರಿಗಿರಲಿ ಎಂದ ಅವರು, ಸಿದ್ದರಾಮಯ್ಯ ಈ ಜನ್ಮದಲ್ಲಿ ಮುಖ್ಯಮಂತ್ರಿಯಾಗುವುದಿಲ್ಲ ಎಂದರು.
ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬುದು ಸರಿ. 2011ರ ಜನಗಣತಿಯ ಪ್ರಕಾರ ಹಲವು ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯದಲ್ಲಿ ನಾಗಮೋಹನ ದಾಸ್ ಅವರ ವರದಿಯನ್ನು ಆಧರಿಸಿ ಕೆಲವು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲಾಗಿದೆ. ಹಾಗೆಯೇ ಹಲವರು ಮೀಸಲಾತಿ ಕೇಳುತ್ತಿದ್ದಾರೆ. ಕುಲಶಾಸ್ತ್ರ ಅಧ್ಯಯನದ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ನವರು ಬಿಜೆಪಿಯವರು ಲಂಚ ಪಡೆಯುತ್ತಿದ್ದಾರೆ ಎಂದು ದಾಖಲೆ ಇಲ್ಲದೆ ಹೇಳುತ್ತಿದ್ದಾರೆ. ಆದರೆ, ನಾವು ಹಾಗಲ್ಲ. ದಾಖಲೆ ಇಟ್ಟುಕೊಂಡು ಮಾತನಾಢುತ್ತೇವೆ. ಈಗಾಗಲೇ ನಮ್ಮ ಪಕ್ಷದ ಎನ್ .ಆರ್ ರಮೇಶ್ ಅವರು, ಸಿದ್ದರಾಮಯ್ಯ 1.30 ಕೋಟಿ ಲಂಚ ತೆಗೆದುಕೊಂಡ ಬಗ್ಗೆ ದಾಖಲೆ ಸಮೇತ ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್ ಭ್ರಷ್ಚಾರಗಳನ್ನೆಲ್ಲ ಬಯಲು ಮಾಡುತ್ತೇವೆ ಎಂದರು.
ಮುಂಬರುವ ವಿದಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ವಿಶೇಷ ಸಮಾವೇಶವನ್ನು ಕಲ್ಬುರ್ಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ಹಿಂದುಳಿದ ವರ್ಗ ಬಿಜೆಪಿ ಜೊತೆ ಇದೆ ಎನ್ನವುದನ್ನು ಇದು ಸಾಬೀತುಪಡಿಸುತ್ತದೆ ಎಂದರು.