ಛತ್ತೀಸ್ಗಢದ ಪಂದರ್ಪಾಡ್ ಎಂಬ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಾಯ್ಪುರದ ಈಶಾನ್ಯಕ್ಕೆ ಸುಮಾರು 350 ಕಿಮೀ ದೂರದಲ್ಲಿರುವ ಜಶ್ಪುರ ಜಿಲ್ಲೆಯ ಗ್ರಾಮ ಇದು. ಇಲ್ಲಿನ ಎಂಟು ವರ್ಷದ ಬಾಲಕನೊಬ್ಬ ನಾಗರ ಹಾವನ್ನು ಕಚ್ಚಿ ಸಾಯಿಸಿದ್ದಾನೆ.
ದೀಪಕ್ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ವಿಷಪೂರಿತ ನಾಗರಹಾವು ಕೈಗೆ ಸುತ್ತಿಕೊಂಡಿತ್ತು. ದೀಪಕ್ ಕೈಗೆ ನಾಗರಹಾವು ಕಚ್ಚಿದೆಯಂತೆ. ಇದರಿಂದ ಆತನಿಗೆ ಸಾಕಷ್ಟು ನೋವಾಗಿತ್ತು. ಹಾವಿನ ಹಿಡಿತವನ್ನು ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಬಾಲಕನೂ ಹಾವಿಗೆ ಎರಡು ಬಾರಿ ಕಚ್ಚಿದ್ದಾನೆ. ಕೂಡಲೇ ಹಾವು ಹಿಡಿತ ಸಡಿಲಿಸಿದೆ. ದೀಪಕ್ ಕಚ್ಚಿದ್ದರಿಂದ ನಾಗರಹಾವು ಸತ್ತು ಹೋಗಿದೆಯಂತೆ.
ಕುಟುಂಬದವರು ಹಾವಿನ ಕಡಿತಕ್ಕೊಳಗಾದ ಬಾಲಕನನ್ನು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆತನಿಗೆ ಹಾವಿನ ವಿರೋಧಿ ವಿಷವನ್ನು ನೀಡಲಾಯಿತು ಮತ್ತು ಇಡೀ ದಿನ ಆತನನ್ನು ಆಬ್ಸರ್ವೇಶನ್ನಲ್ಲಿ ಇಡಲಾಗಿತ್ತು. ಆದರೆ ದೀಪಕ್ನಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಹಾವು ಕಚ್ಚಿದಾಗ ವಿಷ ಬಿಡುಗಡೆಯಾಗಿರಲಿಲ್ಲ, ಹಾಗಾಗಿ ಬಚಾವ್ ಆಗಿದ್ದಾನೆ.
ಮನುಷ್ಯರಿಂದ ಕಡಿತಕ್ಕೊಳಗಾಗಿ ಹಾವು ಸಾಯುವುದು ಅತ್ಯಂತ ಅಪರೂಪದ ಪ್ರಕರಣ. ಜಶ್ಪುರ್ ಜಿಲ್ಲೆಯಲ್ಲಿ ಈವರೆಗೂ ಇಂತಹ ಘಟನೆ ನಡೆದಿರಲಿಲ್ಲವಂತೆ. ಜಶ್ಪುರ್ ಬುಡಕಟ್ಟು ಜಿಲ್ಲೆಯಾಗಿದ್ದು, ಇದನ್ನು ನಾಗ್ಲೋಕ್ (ಸರ್ಪಗಳ ವಾಸಸ್ಥಾನ) ಎಂದೂ ಕರೆಯುತ್ತಾರೆ. ಇಲ್ಲಿ 200ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ.